ಯಾರಿಂದಲೂ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ: ಹೆಚ್.ಡಿ. ರೇವಣ್ಣ | ಜನತಾ ನ್ಯೂಸ್
ಹಾಸನ : ಯಾರಿಂದಲೂ ಸಹ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ ಎಂದು ಎಚ್. ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರಿಂದಲೂ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣ ಆಗಲಿ, ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ನಾವೆಲ್ಲರೂ ಒಂದೇ ಕುಟುಂಬ ಸದಸ್ಯರಾಗಿ ಒಟ್ಟಿಗಿದ್ದೇವೆ. ಮಂಡ್ಯ ಸಂಸದೆ ಸುಮಲತಾ ಅವರು ನೀಡಿರುವ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ, ನಮ್ಮ ಕುಟುಂಬವನ್ನು ಒಡೆಯುವ ಹೇಳಿಕೆಯನ್ನೂ ನಾನು ನೀಡುವುದಿಲ್ಲ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋದರೆ ನಾವು ಸಣ್ಣವರಾಗುತ್ತೇವೆ. ಕುಟುಂಬ ಒಡೆಯುವ ಇಂತಹ ಹೇಳಿಕೆಯನ್ನು ಸಂಸದೆ ಸುಮಲತಾ ಅವರು ನೀಡಬಾರದು. ಅಕ್ರಮ ಗಣಿಗಾರಿಕೆ ಮಾಡಿದ್ದರೆ ತನಿಖೆ ಮಾಡಿ ಕ್ರಮ ಕೈಗೊಂಡು ಮುಟ್ಟುಗೋಲು ಹಾಕಬೇಕು. ಅದನ್ನು ಅದನ್ನು ಬಿಟ್ಟು ಕುಟುಂಬ ಒಡೆಯುವ ಕೆಲಸಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಿವಂಗತ ನಟ ಅಂಬರೀಶ್ ಬಗ್ಗೆ ಅಪಾರವಾದ ಗೌರವವಿದೆ. ಕುಮಾರಸ್ವಾಮಿ ಹಾಗೂ ಅಂಬರೀಶ್ ಅವರೊಂದಿಗಿನ ಸಂಬಂಧ ಹೇಗಿತ್ತು ಎಂದು ನಾನು ಕಂಡಿದ್ದೇನೆ. ಕುಮಾರಸ್ವಾಮಿ ಎಂದಿಗೂ ಸಹ ದ್ವೇಷದ ರಾಜಕಾರಣ ಮಾಡಿಲ್ಲ. ಬಡವರ ಬಗ್ಗೆ ಕರುಣೆ ಇರುವ ರಾಜಕಾರಣ ಕುಮಾರಸ್ವಾಮಿ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.
ಕಳೆದ ಎಂಪಿ ಚುನಾವಣೆಯಲ್ಲಿ ಬಿಜೆಪಿ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪನವರು ಸುಮಲತಾ ಅವರಿಗೆ ಸಹಾಯ ಮಾಡಿದ್ದಾರೆ, ಈಗಲೂ ಮಂಡ್ಯ ಜಿಲ್ಲೆಯ ಜನರ ಒಳಿತಿಗೆ ಸರ್ಕಾರದಿಂದ ಸಹಾಯ, ಅನುದಾನ ತರಿಸಿಕೊಳ್ಳಲಿ, ಕೆಲಸ ಮಾಡಿ ತೋರಿಸಲಿ, ಕುಮಾರಸ್ವಾಮಿಯವರು ದ್ವೇಷದ ರಾಜಕಾರಣ ಮಾಡುವುದಿಲ್ಲ, ಅಂಬರೀಷ್ ಅವರ ಬಗ್ಗೆ ನಮಗೆ ಗೌರವ ಇದೆ, ಅದನ್ನು ಸುಮಲತಾ ಅವರು ಉಳಿಸಿಕೊಳ್ಳಲಿ ಎಂದರು.