ಕುಡಿಯೋಕೆ ಹಣ ಕೊಡದ ಪತ್ನಿಯ ಮೂಗು ಕಚ್ಚಿದ ಪತಿ ಪರಾರಿ | ಜನತಾ ನ್ಯೂಸ್
ಹುಬ್ಬಳ್ಳಿ : ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿ ಪತ್ನಿಯ ಮೂಗನ್ನು ಕಚ್ಚಿ ಗಾಯಗೊಳಿಸಿದ ಪತಿ ಪರಾರಿಯಾಗಿರುವ ಘಟನೆ ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.
ಉಮೇಶ್ ಎಂಬಾತ ಪತ್ನಿ ಗೀತಾಳ ಮೂಗು ಕಚ್ಚಿ ಗಾಯಗೊಳಿಸಿದ್ದಲ್ಲದೆ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲು ಬಂದ ಅತ್ತೆಯ ಕತ್ತು ಹಿಸುಕಿ ಅವಳ ಮೇಲೆ ಸಹ ಹಲ್ಲೆ ಮಾಡಿದ್ದಾನೆ.
ನಿನ್ನೆ (ಜುಲೈ 10) ರಾತ್ರಿ ಗೀತಾಳೊಂದಿಗೆ ಮೊದಲಿಗೆ ಉಮೇಶ ಸಣ್ಣದಾಗಿ ಜಗಳ ತೆಗೆದಿದ್ದಾನೆ. ನಿತ್ಯ ಕುಡಿದು ಬಂದು ಇದೇ ರೀತಿ ಬೈಯುತ್ತಿದ್ದ ಕಾರಣಕ್ಕೆ ಗೀತಾ ಈತನ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರೆ ಏಕಾಏಕಿಯಾಗಿ ಗೀತಾಳ ಮೂಗು ಕಚ್ಚಿದ ಉಮೇಶ, ಗೀತಾಳ ತಾಯಿಯ ಕತ್ತುನ್ನು ಹಿಸುಕಿದ್ದಾನೆ. ಈ ವೇಳೆ ತಾಯಿ, ಮಗಳು ಚೀರಾಡುವುದನ್ನು ಕೇಳಿದ ಜನ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲೇ ಉಮೇಶ ಪರಾರಿಯಾಗಿದ್ದಾನೆ.
ಉಮೇಶ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದವನು. ಉಮೇಶ ಮತ್ತು ಗೀತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಕುಡಿತದ ದಾಸನಾಗಿದ್ದ ಉಮೇಶ, ಐದು ವರ್ಷದ ಹಿಂದೆ ಪತ್ನಿಯೊಂದಿಗೆ ಜಗಳ ಮಾಡಿ ಆಕೆಯನ್ನು ತವರು ಮನೆಗೆ ಕಳುಹಿಸಿದ್ದನಂತೆ. ಜೊತೆಗೆ ಪತ್ನಿಯ ನಡತೆಯ ಮೇಲೆ ಅನುಮಾನ ಪಡುತ್ತಿದ್ದನಂತೆ.
ಆರು ತಿಂಗಳ ಹಿಂದೆ ಮರಳಿ ಬಂದ ಉಮೇಶ ಪತ್ನಿ ಮನೆಯಲ್ಲಿಯೇ ಇರೋಕೆ ಶುರು ಮಾಡಿದ್ದ. ಕುಡಿದು ಬಂದು ಆಗಾಗ ಜಗಳ ತೆಗೆಯುತ್ತಲೇ ಇದ್ದ ಎನ್ನಲಾಗಿದೆ.
ಗೀತಾಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ಈ ಕೃತ್ಯದ ಬಗ್ಗೆ ಗೀತಾ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಉಮೇಶ್ ಗಾಗಿ ಪೋಲೀಸರ ಶೋಧ ಮುಂದುವರಿದಿದೆ.