ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ: ಮಹಿಳೆ ಸೇರಿ ಇಬ್ಬರ ಬಂಧನ | ಜನತಾ ನ್ಯೂಸ್
ಬೆಂಗಳೂರು : ನಗರದ ಜ್ಞಾನ ಜ್ಯೋತಿ ನಗರದಲ್ಲಿ ಭೀಕರವಾಗಿ ಕೊಲೆಯಾದ ಮಹಿಳೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿನ್ನ ಸುಲಿಗೆ ಮಾಡಲು ಗೃಹಿಣಿಯನ್ನು ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪದಡಿ ಮಹಿಳೆ ಸೇರಿ ಇಬ್ಬರನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ. ಇಂದಿರಮ್ಮ ಹಾಗೂ ರಾಜಶೇಖರ್ ಬಂಧಿತರು. ಅವರಿಂದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಯುಧ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.
ರಂಜಿತಾ ಎಂಬ 26 ವರ್ಷದ ಮಹಿಳೆಯ ಕೊಲೆ ಪ್ರಕರಣವಿದು. ರಂಜಿತಾರ ಕತ್ತಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ಸಾಕ್ಷಿ ನಾಶ ಪಡಿಸಲು ಯತ್ನಿಸಲಾಗಿತ್ತು. ಆರೋಪಿಗಳು ಮೃತಳ ಕೈಯಲ್ಲಿ ಚಾಕು ಇಟ್ಟು ಪರಾರಿಯಾಗಿದ್ದರು.
ಇದೀಗ ಈ ಕೊಲೆ ರಹಸ್ಯವನ್ನು ಕೆಂಗೇರಿ ಗೇಟ್ ಉಪವಿಭಾಗದ ಎಸಿಪಿ ಯು ಡಿ ಕೃಷ್ಣಕುಮಾರ್ ನೇತೃತ್ವದಲ್ಲಿ ಭೇದಿಸಲಾಗಿದ್ದು, ರಾಜಶೇಖರ ಮತ್ತು ಇಂದ್ರಮ್ಮ ಎನ್ನುವವರನ್ನು ಬಂಧಿಸಿದ್ದಾರೆ. ರಂಜಿತಾ ಅವರು ಫೋಟೋದಲ್ಲಿ ಧರಿಸಿದ್ದ ಚಿನ್ನದ ಸರಕ್ಕಾಗಿ ಈ ಆರೋಪಿಗಳು ಅವರ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಬೀದರ್ನ ರಂಜಿತಾ ಎಂಬುವರು ಜ್ಞಾನಭಾರತಿ ಬಳಿಯ ಜ್ಞಾನಜ್ಯೋತಿ ಬಡಾವಣೆಯಲ್ಲಿ ಪತಿ ಹಾಗೂ ಮೈದುನನ ಜೊತೆ ವಾಸವಿದ್ದರು. ಅವರನ್ನು ಪರಿಚಯ ಮಾಡಿಕೊಂಡಿದ್ದ ಇಂದಿರಮ್ಮ, ಆಗಾಗ ಮನೆಗೆ ಹೋಗಿ ಬರುತ್ತಿದ್ದರು.
ರಂಜಿತಾ ಬಳಿ ಚಿನ್ನಾಭರಣ ಹಾಗೂ ನಗದು ಇರುವುದನ್ನು ಆರೋಪಿ ಗಮನಿಸಿದ್ದಳು. ಇತ್ತೀಚೆಗೆ ಲಾಕ್ಡೌನ್ನಿಂದಾಗಿ ಇಂದಿರಮ್ಮ ಕೆಲಸ ಹೋಗಿತ್ತು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆರೋಪಿ, ಹಣ ಗಳಿಸುವ ಆಸೆಯಿಂದ ಪರಿಚಯಸ್ಥ ರಾಜಶೇಖರ್ ಜೊತೆ ಸೇರಿ ಸಂಚು ರೂಪಿಸಿದ್ದರು.
ನಂತರ ರಂಜಿತಾ ಅವರ ಪತಿ ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದಿದ್ದಳು ಇಂದ್ರಮ್ಮ. ಈ ವೇಳೆ ರಂಜಿತಾ ಸ್ನಾನಕ್ಕೆ ಹೋಗಿದ್ದರು. ಅದೇ ವೇಳೆ ಇನ್ನೊಬ್ಬ ಆರೋಪಿ ರಾಜಶೇಖರನನ್ನು ಕರೆದಿದ್ದಾಳೆ. ಸ್ನಾನ ಮುಗಿಸಿ ಬರುತ್ತಿದ್ದಂತೆಯೇ ಕುತ್ತಿಗೆಯನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾರೆ.
ನಂತರ ಸರಕ್ಕಾಗಿ ಎಲ್ಲೆಡೆ ಹುಡುಕಿದ್ದಾರೆ. ಅದು ಸಿಗದಿದ್ದಾಗ ಕಿವಿಯಲ್ಲಿದ್ದ ಓಲೆ ಮತ್ತು ತಾಳಿಯ ಗುಂಡಿನ ಮೇಲೆ ಕಣ್ಣು ಹೋಗಿದೆ. ಕಿವಿಯನ್ನು ಕತ್ತರಿಸಿ ಓಲೆ ತೆಗೆದುಕೊಂಡಿದ್ದಾರೆ. ಆದರೆ ಅದು ಹಿತ್ತಾಳೆಯದ್ದು ಎಂದು ತಿಳಿದಾಗ ಅಲ್ಲಿಯೇ ಎಸೆದು ಚಾಕುವನ್ನು ರಂಜಿತಾ ಕೈಗೆ ಕೊಟ್ಟು ಪರಾರಿಯಾಗಿದ್ದಾರೆ.
ಹೋಗುವಾಗ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದರು. ಅದರ ಲೊಕೇಷನ್ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಅವರು ಸತ್ಯ ಒಪ್ಪಿಕೊಂಡಿದ್ದಾರೆ.