ಕೆಲವರು ನಮ್ಮ ಧರ್ಮ ಅಂತಾರೆ, ನಿಮ್ಮ ಧರ್ಮ ನೀವು ಇಟ್ಕೊಳ್ಳಿ, ಬೇರೆ ಧರ್ಮ ವಿರೋಧ ಮಾಡಬೇಡಿ | ಜನತಾ ನ್ಯೂಸ್
ಬಾಗಲಕೋಟೆ : ಓದಿದವರು ಜಾತಿಗಳ ಬಗ್ಗೆ ಮಾತನಾಡಬಾರದುಸಮಾಜದಲ್ಲಿ ಜಾತಿ ವ್ಯವಸ್ಥೆ ಇದೆ. ಓದಿದವರು ಹಳ್ಳಿಯಲ್ಲಿ ಹೋಗಿ ಜಾತಿ ಮಾಡ್ತಾರೆ. ದಯವಿಟ್ಟು ಓದಿದವರು ಜಾತಿ ಮಾಡಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ನೀತಿಪಾಠ ಮಾಡಿದರು.
ಕೆಲವರು ನಮ್ಮ ಧರ್ಮ ನಮ್ಮ ಧರ್ಮ ಅಂತಾರೆ, ನಿಮ್ಮ ಧರ್ಮ ನೀವು ಇಟ್ಕೊಳ್ಳಿ ಆದ್ರೆ ಬೇರೆ ಧರ್ಮ ವಿರೋಧ ಮಾಡಬೇಡಿ ಎಂದು ಪರೋಕ್ಷವಾಗಿ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಬಾದಾಮಿ ಕ್ಷೇತ್ರ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಿದರು.
ಬಾದಾಮಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಕ್ಕಳಿಗೆ ಟ್ಯಾಬ್ ವಿತರಿಸಿ ಮಾತನಾಡಿದ ಅವರು, ನೀವೆಲ್ಲ ಪದವಿ ಶಿಕ್ಷಣ ಪಡೆಯುತ್ತಿದ್ದೀರಿ ಮೊದಲು ಮನುಷ್ಯತ್ವ ಬೆಳೆಸಿಕೊಳ್ಳಿ. ಕೆರೂರನಲ್ಲಿ ಇಲ್ಲಿಯವರೆಗೆ ಪ್ರಥಮ ದರ್ಜೆ ಕಾಲೇಜ್ ಗೆ ಹೊಸ ಕಟ್ಟಡ ಇರಲಿಲ್ಲ. ಜಾಗ ಇಲ್ಲದ ಕಾರಣ ಕಟ್ಟಡ ಇರಲಿಲ್ಲ. ಕೆಐಎಡಿಬಿ ಇಂದ 29 ಎಕರೆ ಜಾಗ ಕೊಡಿಸಿದ್ದೀನಿ. ಅದು ಕೋರ್ಟ್ಗೆ ಹೋಗಿತ್ತು, ನಾನು ಹೈ ಕೋರ್ಟ್ ಗೆ ಹೋಗಿ ನಂತರ ಆ ಜಾಗ ಕೆಐಎಡಿಬಿಗೆ ಬಂತು. ನಾನು ಕೆಐಎಡಿಬಿಯಿಂದ ಕಾಲೇಜ್ ಗೆ 29 ಎಕರೆ ಜಾಗ ಕೊಡಿಸಿದ್ದೀನಿ, ದುಡ್ಡು ಕೊಡಿಸಿದ್ದೀನಿ. ನಾಳೆಯಿಂದಲೇ ಸರ್ಕಾರಿ ಪ್ರಥಮದರ್ಜೆ ಕಾಲೇಜ್ ಕಟ್ಟಡ ಕಾಮಗಾರಿ ಆರಂಭವಾಗುತ್ತೆ ಎಂದರು.
ನಮ್ಮ ಜಾತಿ ನಮ್ಮ ಜಾತಿ ಅಂತ ಓದಿಕೊಂಡು ಹೋದವರೇ ಹಳ್ಳಿಯಲ್ಲಿ ಜಾತಿ ಮಾಡೋದು. ಬಸವಣ್ಣನವರ ವಚನ ಈಗ ಹೇಳೋ ಬದನೆಕಾಯಿ ಆಗಿಬಿಟ್ಟಿದೆ. ಇವನಾರವ ಇವನಾರವ ಅನ್ನೋದು. ಇವ ನಮ್ಮವ ಇವ ನಮ್ಮವ ಅನ್ರಪ್ಪ ಅಂದ್ರೆ, ನೀನು ಯಾವ ಜಾತಿಯವನಯ್ಯ ಯಾವ ಜಾತಿಯಲ್ಲಿ ಹುಟ್ಟಿದಿಯಪ್ಪ ಅನ್ನೋದು ಇದೆ.
ಇದು ಹೋಗಬೇಕು ಬಸವಣ್ಣನವರು ಎಂಟು ನೂರು ವರ್ಷಗಳ ಹಿಂದೆ ಹೇಳಿದ್ದಾರೆ. ಇವನಾರು ಇವನಾರು ಅಂತ ಕೇಳಬೇಡಯ್ಯ, ಇವರೆಲ್ಲ ನಮ್ಮವರು ನಮ್ಮವರು ಅಂತ ಅನ್ರಯ್ಯ ಅಂತ ಹೇಳಿದ್ದಾರೆ. ಶಿಕ್ಷಣ ಪಡೆಯೋದು ನಮ್ಮ ಜಾತಿಯವರು ಅನ್ನೋದಕ್ಕಾ?
ಮೌಢ್ಯಗಳು ಇರಬಾರದು, ಕಂದಾಚಾರ ಇರಬಾರದು ನಮ್ಮ ಸರ್ಕಾರದಲ್ಲಿ ಮೌಢ್ಯ ನಿಷೇಧ ತಂದಿದ್ವಿ. ಕೆಲವರು ಯಾಕಯ್ಯಾ ಬಟ್ಟೆ ಹರ್ದೋಗಿದೆ, ಚಡ್ಡಿ ಹರ್ದೋಗಿದೆ ಅಂದ್ರೆ ನಮ್ಮ ಹಣೆ ಬರಹ ಅಂತಾರೆ. ಒಂದು ವೇಳೆ ಹಣೆಯಲ್ಲಿ ಬರೆದಿದ್ದರೆ ದೇವರು ಚಡ್ಡಿ ಹಾಕೋಬೇಡ ಅಂತ ಬರೆದಿರುತ್ತಾನಾ. ಹಾಗೆ ಬರೆದರೆ ಅವನೆಂತ ದೇವರು? ಚಡ್ಡಿ ಇಲ್ದೆ, ಊಟ ಇಲ್ದೆ ಬದುಕು ಅಂದ್ರೆ ಅವನು ದೇವ್ರೇ ಅಲ್ಲ.
ಎಲ್ಲರಿಗೂ ರಕ್ಷಣೆ ಕೊಡೋನು ದೇವರು. ಎಲ್ಲರನ್ನೂ ಸಮಾನವಾಗಿ ಕಾಣುವವನು ದೇವರು. ಒಬ್ಬರಿಗೆ ಚಡ್ಡಿ ಇಲ್ಲ, ಒಬ್ಬರಿಗೆ ಅಂಗಿ ಇಲ್ಲ, ಒಬ್ಬರಿಗೆ ದೋತಿ ಇಲ್ಲ. ಇನ್ನ ಕೆಲವರಿಗೆ ಸೂಟ್ ಹಾಕೊಂಡಿರು ಅಂತ ಹಣೆ ಬರೆದಿದ್ದಾರೆ ದೇವರು? ಇದು ಮೂಢನಂಬಿಕೆ ಕಂದಾಚಾರ ಎಂದು ಮೌಢ್ಯ ಆಚರಣೆ ಕುರಿತು ಬೋಧನೆ ಮಾಡಿದರು.