ಹಿಮಾಚಲ ಪ್ರದೇಶದಲ್ಲಿ ಬಂಡೆಗಳೊಂದಿಗೆ ಭೂಕುಸಿತ : 9 ಪ್ರವಾಸಿಗಳ ಸಾವು, ಹಲವರಿಗೆ ಗಾಯ | ಜನತಾ ನ್ಯೂಸ್
ಡೆಹ್ರಾಡೂನ್ : ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದಿಂದಾಗಿ ಬಂಡೆಗಳು ಗುಡ್ಡದ ಮೇಲಿಂದ ಕೆಳಗಡೆಯಿದ್ದ ನದಿ, ರಸ್ತೆ, ಸೇತುವೆ ಹಾಗೂ ಕಟ್ಟಡಗಳ ಮೇಲೆ ಉರುಳಿದ ಘಟನೆ ನಡೆದಿದೆ. ಭಾರಿ ಗಾತ್ರದ ಬಂಡೆಗಳು ಉರುಳಿದ ಪರಿಣಾಮ 9 ಜನರು ಸಾವನಪ್ಪಿ ಹಲವರು ಗಾಯಗೊಂಡಿದ್ದಾರೆ ಜೊತೆಗೆ ಸೇತುವೆ ಕುಸಿದಿರುವುದು ಸೇರಿದಂತೆ, ಕಟ್ಟಡಗಳು ಹಾಗೂ ವಾಹನಗಳು ಹಾನಿಗೊಳಗಾಗಿವೆ.
ರಕ್ಷಣಾ ಕಾರ್ಯಾಚರಣೆ ನಡೆಸಲು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ತಂಡಗಳು ಕಿನ್ನೌರಿನ ಬಡ್ಸೆರಿ ಗ್ರಾಮದ ಬಳಿ ಸ್ಥಳಕ್ಕೆ ಧಾವಿಸಿವೆ. ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ 12 ಜನರಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಸೇರಿದಂತೆ ಮೂವರು ಗಾಯಗೊಂಡಿದ್ದಾರೆ, ಎಂದು ಐಟಿಬಿಪಿ ತಿಳಿಸಿದೆ.
ಹಿಮಾಚಲ ಪ್ರದೇಶದ ಕಿನ್ನೌರ್ನಲ್ಲಿ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ರಕ್ತ ಸಂಬಂಧಿಕರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ(ಪಿಎಂಎನ್ಆರ್ಎಫ್)ನಿಂದ ತಲಾ ರೂ.2 ಲಕ್ಷ ಅನುಕಂಪದ ಪರಿಹಾರ ಮತ್ತು ಗಾಯಾಳುಗಳಿಗೆ ರೂ.50,000 ನೀಡಲಾಗುವುದು, ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ನಾನು ಕಿನ್ನೌರ್ ಜಿಲ್ಲಾಡಳಿತದೊಂದಿಗೆ ಮಾತನಾಡಿದ್ದೇನೆ ಮತ್ತು ಅಪಘಾತದ ಬಗ್ಗೆ ವಿಚಾರಿಸಿದೆ. ಆಡಳಿತವು ಸ್ಥಳದಲ್ಲೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ಅಲ್ಲಿ ತಕ್ಷಣ ಪರಿಹಾರ ನೀಡಲಾಗುತ್ತಿದೆ. ಗಾಯಾಳುಗಳನ್ನು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ, ಎಂದು ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಹೇಳಿದ್ದಾರೆ.