ನನ್ನನ್ನು ಸಿಎಂ ಮಾಡುವಂತೆ ಯಾರ ಬಳಿಯೂ ಕೇಳಿಲ್ಲ: ಬಸವರಾಜ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಸಿಎಂ ಸ್ಥಾನಕ್ಕೆ ನನ್ನ ಹೆಸರು ಪ್ರಸ್ತಾಪವಾಗುತ್ತಿರುವ ಬಗ್ಗೆ ಮಾಧ್ಯಮಗಳಿಂದಲೇ ನನಗೆ ತಿಳಿದುಬಂದಿದೆಯೇ ಹೊರತು ನಾನೆಲ್ಲಿಯೂ ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದು ಕೇಳಿಲ್ಲ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ವಿಷಯಗಳು ಪ್ರಸ್ತಾಪವಾಗಿ, ಚರ್ಚೆಗೊಳಪಡಲಿವೆ. ಆನಂತರ, ಶಾಸಕರು ನೂತನ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಿದ್ದಾರೆ ಎಂದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ನಿರ್ಣಯ ಮೊದಲು ರಾಜ್ಯಮಟ್ಟದಲ್ಲಿ, ಬಳಿಕ ಕೇಂದ್ರ ಮಟ್ಟದಲ್ಲಿ ನಿರ್ಣಯವಾಗಿ, ಆನಂತರ ಸಂಸದೀಯ ಮಂಡಳಿಯಲ್ಲಿ ಅಂತಿಮ ನಿರ್ಣಯವಾಗಲಿದೆ. ಬಿಜೆಪಿ ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ನಿರ್ಣಯಗಳಾಗುತ್ತವೆ. ಅಂತಿಮ ನಿರ್ಣಯ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರವಾಗುತ್ತದೆ ಎಂದು ಬೊಮ್ಮಾಯಿ ಹೇಳಿದರು.