ನಾಳೆ ದೆಹಲಿಗೆ ಸಿಎಂ ಪ್ರವಾಸ: ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸ! | ಜನತಾ ನ್ಯೂಸ್
ಬೆಂಗಳೂರು : ನಾಳೆ ಬೆಳಗ್ಗೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ವರಿಷ್ಠರ ಭೇಟಿಗೆ ನವದೆಹಲಿಗೆ ತೆರಳುತ್ತಿದ್ದಾರೆ. ಆದರೆ ಸಿಎಂಗೂ ಮೊದಲೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿಗೆ ತೆರಳುತ್ತಿದ್ದಾರೆ.
ವರಿಷ್ಠರ ಭೇಟಿ ಮಾಡಲಿರುವ ಅವರು ಇದೇ ವೇಳೆ ಧನ್ಯವಾದಗಳನ್ನು ತಿಳಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಯಾಗಿ ಕೃತಜ್ಞತೆಯನ್ನು ತಿಳಿಸಲಿದ್ದಾರೆ. ಈ ವೇಳೆ ಅವರು ನೂತನ ಸಚಿವ ಸಂಪುಟ ರಚನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇನ್ನು ತಮ್ಮ ದೆಹಲಿ ಪ್ರವಾಸದ ಕುರಿತು ಮಾತನಾಡಿರುವ ಸಿಎಂ, ನಾಳೆ ನಾನು ದೆಹಲಿಗೆ ಭೇಟಿ ನೀಡುತ್ತಿದ್ದು, ಪ್ರಧಾನಿ, ಗೃಹ ಸಚಿವರು ಹಾಗೂ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತಿದ್ದೇನೆ. ಆದರೆ, ಈ ವೇಳೆ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸುವುದಿಲ್ಲ. ಇದಾದ ಎರಡ್ಮೂರು ದಿನಗಳ ಬಳಿಕ ಮತ್ತೆ ಅವರನ್ನು ಭೇಟಿಯಾಗಿ ಸಂಪುಟ ರಚನೆ ಕುರಿತು ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.
ನಾಳೆ ಸಂಜೆ 7 ಗಂಟೆಗೆ ಕರ್ನಾಟಕ ಭವನದಲ್ಲಿ ಬೊಮ್ಮಯಿ ಸಭೆ ನಡೆಸಲಿದ್ದಾರೆ. ಪಕ್ಷದ ಸಂಸದರು ಹಾಗೂ ಕೇಂದ್ರದ ಸಚಿವರ ಜೊತೆ ನಡೆಯುವ ಸಭೆಯಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಬೇಕಾಗಿರುವ ಕೆಲಸ ಕಾರ್ಯಗಳು, ಬಾಕಿ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.ಇನ್ನು ಸಿಎಂ ದೆಹಲಿಗೆ ತೆರಳುವ ಮುನ್ನವೇ ಸಚಿವ ಸ್ಥಾನದ ಆಕಾಂಕ್ಷಿಗಳು ದೆಹಲಿ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈಗಾಗಲೇ ಆರ್.ಅಶೋಕ್ ದೆಹಲಿ ತಲುಪಿದ್ದು, ಸಂಜೆ ಸಿಪಿ ಯೋಗೇಶ್ವರ್ ಕೂಡ ದೆಹಲಿಗೆ ತೆರಳಲಿದ್ದಾರೆ. ಬಿಎಲ್ ಸಂತೋಷ್ ಸೇರಿ ವರಿಷ್ಠರ ಭೇಟಿ ಪ್ರಯತ್ನ ನಡೆಸಲಿದ್ದಾರೆ.