ಒಂದೇ ಮನೆಯಲ್ಲಿದ್ದರು ಪತ್ನಿ-ಪತಿ-ಸ್ನೇಹಿತ! ಗಂಡನಿಗೆ ಮುಹೂರ್ತ ಇಟ್ಟ ಪತ್ನಿ! | ಜನತಾ ನ್ಯೂಸ್
ಬೆಂಗಳೂರು : ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಮದುವೆಯಾಗಿ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಪ್ರೀತಿಸಿ ಮದುವೆಯಾದ ಈ ಜೋಡಿ ಅತ್ಯಂತ ಅನ್ಯೂನ್ಯವಾಗಿ ಜೀವನ ನಡೆಸುತ್ತಿತ್ತು. ಮನೆಯಲ್ಲಿ ಗಂಡನ ಸ್ನೇಹಿತನು ಬಂದು ಪತಿ-ಪತ್ನಿ ಜತೆಗೆ ತಂಗಿದ್ದ. ಈಗ ಆಶ್ರಯ ಕೊಟ್ಟ ಸ್ನೇಹಿತನೆ ಶವವಾಗಿದ್ದಾನೆ.
ಮಂಡ್ಯದ ಕೀಲಾರ ಮೂದವ ಕಾರ್ತಿಕ್ ಎಂಬಾತ ರಂಜಿತಾಳನ್ನು 5 ವರ್ಷದ ಹಿಂದೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಬದುಕು ಕಟ್ಟಿಕೊಳ್ಳಲೆಂದು ಬೆಂಗಳೂರಿಗೆ ಬಂದಿದ್ದ ಈ ಜೋಡಿ, ಕಾರ್ತಿಕ್ನ ಸ್ನೇಹಿತ ಸಂಜೀವ್ ಮನೆಯಲ್ಲೇ ಚಾಮರಾಜಪೇಟೆಯ ಬಂಡಿಮಾಕಾಳಮ್ಮ ದೇವಸ್ಥಾನ ಬಳಿ ವಾಸವಿತ್ತು.
ಈ ದಂಪತಿಗೆ 4 ವರ್ಷದ ಹೆಣ್ಣು ಮಗು ಕೂಡ ಇದೆ. ಇವರ ಜತೆಯಲ್ಲೇ ಸಂಜೀವ್ ಕೂಡ ವಾಸವಿದ್ದ. ಇವರಿಬ್ಬರೂ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ಈ ವೇಳೆಯಲ್ಲಿ ಕಾರ್ತಿಕ್ ಪತ್ನಿ ಹಾಗೂ ಸಂಜೀವನ ಜೊತೆ ಸಲುಗೆ ಬೆಳೆದು, ಈ ಸಲುಗೆ ಅಕ್ರಮ ಸಂಬಂಧಕ್ಕೆ ತಿರುಗಿದೆ.
ಸ್ನೇಹಿತನ ನಂಬಿಕೆಗೆ ವಂಚಿಸಿ ಸ್ನೇಹಿತನ ಪತ್ನಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಸಂಜೀವ್ ಆಶ್ರಯ ಕೊಟ್ಟ ಸ್ನೇಹಿತನನ್ನೇ ವಂಚಿಸಿ, ಗೆಳೆಯನ ಹೆಂಡತಿಯನ್ನೆ ಬುಟ್ಟಿಗೆ ಹಾಕಿಕೊಂಡಿದ್ದಾನೆ. ಇದೇ ವೇಳೆ ತನ್ನ ಎರಡನೇ ಪ್ರೀತಿಯ ಬಲೆಯ ಅಮಲಿನಲ್ಲಿ ಇದ್ದ ಪತ್ನಿ ರಂಜಿತಾ ಎರಡನೇ ಪ್ರೀತಿಗಾಗಿ ಕೈಹಿಡಿದ ಗಂಡನನ್ನೆ ಮುಗಿಸೋ ಪ್ಲಾನ್ ಮಾಡಿದ್ದಾಳೆ.
ತನ್ನ ಎರಡನೇ ಪ್ರಿಯಕರನಿಗೆ ತನ್ನ ಗಂಡನನ್ನು ಮುಗಿಸುವಂತೆ ಉಪಾಯ ಕೊಟ್ಟಿದ್ದಾಳೆ. ಇದೇ ವೇಳೆ ಸಂಜೀವ್ ತನ್ನ ಸ್ನೇಹಿತ ಸುಬ್ರಮಣಿ ಜೊತೆ ಸೇರಿ ಕಾರ್ತಿಕ್ ಕೊಲೆಗೆ ಯೋಜನೆ ಹಾಕಿಕೊಂಡಿದ್ದಾನೆ. ಅದರಂತೆ ತನಗೆ ಆಶ್ರಯ ಕೊಟ್ಟ ಸ್ನೇಹಿತ ಕಾರ್ತಿಕ್ಗೆ ಕಂಠ ಪೂರ್ತಿ ಮದ್ಯಪಾನ ಮಾಡಿಸಿ ಚೆನ್ನಪಟ್ಟಣಕ್ಕೆ ಆರೋಪಿಗಳು ಕರೆದೊಯ್ದಿದ್ದಾರೆ.
ಅಲ್ಲಿ ಕಾರ್ತಿಕ್ ತಲೆಗೆ ದೊಣ್ಣೆಯಿಂದ ಹೊಡೆದು ಕುತ್ತಿಗೆ ಬಿಗಿದು ಕೊಂದ ಸಂಜೀವ್ ಮತ್ತು ಸುಬ್ರಹ್ಮಣಿ, ಶವವನ್ನು ಚೀಲದಲ್ಲಿ ತುಂಬಿ ಬೆಂಗಳೂರಿಗೆ ಆಟೋದಲ್ಲಿ ತಂದಿದ್ದರು. ಬಳಿಕ ಕುಂಬಳಗೋಡಿನ ಬಳಿ ವೃಷಭಾವತಿ ನದಿಗೆ ಎಸೆದು ಪರಾರಿಯಾಗಿದ್ದರು.
ಇತ್ತ ಗಂಡನ ಕೊಲೆಗೆ ಪ್ಲಾನ್ ಕೊಟ್ಟು ಆ.1ರಂದು ಕೆಂಪೇಗೌಡನಗರ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಳು ಪತ್ನಿ ರಂಜಿತಾ. ತನಿಖೆ ಕೈಗೊಂಡ ಪೊಲೀಸರು ರಂಜಿತಾಳ ಮೇಲೆ ಅನುಮಾನಗೊಂಡು ವಿಚಾರಣೆಗೆ ಠಾಣೆಗೆ ಕರೆದಿದ್ದರು. ಈ ವೇಳೆ ರಂಜಿತಾಳ ಜತೆ ಪ್ರಿಯಕರ ಸಂಜೀವ್ ಕೂಡ ಬಂದಿದ್ದ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳಾದ ರಂಜಿತಾ, ಸಂಜೀವ್, ಸುಬ್ರಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.