ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | ಜನತಾ ನ್ಯೂಸ್
ಕಲಬುರಗಿ : ತ್ರಿಪುರಾದ ಧಲಾಯ್ ನಲ್ಲಿ ಉಗ್ರರೊಂದಿಗೆ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದ ಕರ್ನಾಟಕದ ಬಿಎಸ್ಎಫ್ ಯೋಧ ರಾಜ್ ಕುಮಾರ್ ಎಂ.ಮವಿನ್ ಅವರ ಅಂತ್ಯಕ್ರಿಯೆ ಕಲಬುರಗಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.
ಆಳಂದ ತಾಲೂಕಿನ ಚಿಂಚನಸೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಆ.07 ರಂದು ರಾತ್ರಿ ರಾಜ್ ಕುಮಾರ್ ಮಾವಿನ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ ನ ವಿಮಾನ ನಿಲ್ದಾಣದ ಮೂಲಕ ಚಿಂಚನಸೂರು ಗ್ರಾಮಕ್ಕೆ ತರಲಾಗಿತ್ತು.
ಮಧ್ಯಾಹ್ನದ ವರೆಗೂ ಪಾರ್ಥಿವಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಹುತಾತ್ಮ ಯೋಧನಿಗೆ ಸರ್ಕಾರಿ ಗೌರವ ಸಲ್ಲಿಸುವುದಕ್ಕಾಗಿ ಪೊಲೀಸರು 3 ಸುತ್ತಿನ ಗುಂಡು ಹಾರಿಸಿದರು. ಬೌದ್ಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.
ಡಿಸಿ ವಿ.ವಿ ಜ್ಯೋತ್ಸ್ನಾ, ಎಸ್ ಪಿ ಸಿಮಿ ಮರಿಯನ್ ಜಾರ್ಜ್, ಬಿಎಸ್ಎಫ್ ನ ಹಿರಿಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ರಾಜಕುಮಾರ್ ಅವರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾಡಳಿತ ಅಂತ್ಯಕ್ರಿಯೆ ನೆರವೇರಿಸಿದೆ..
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಬಿಎಸ್ಎಫ್ ಯೋಧ ರಾಜ್ಕುಮಾರ್ ಮಾಪಣ್ಣಾ ಮಾವೀನಕರ್, ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. ಇಂಡೋ-ಬಾಂಗ್ಲಾ ಗಡಿಯಲ್ಲಿ ಉಗ್ರರ ಗುಂಡಿಗೆ ಎದೆಗೊಟ್ಟು ಹುತಾತ್ಮರಾಗಿದ್ದಾರೆ. ದೇಶ ಸೇವೆಗೆಂದು ತನ್ನ ಜೀವ ಮುಡಿಪಿಟ್ಟ ಯೋಧನ ನೆನೆದು ಇಡೀ ಗ್ರಾಮವೀಗ ಶೋಕ ಸಾಗರದಲ್ಲಿ ಮುಳುಗಿದೆ.
ಯೋಧ ರಾಜ್ಕುಮಾರ್, ಕಲಬುರಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದುತ್ತಿರುವಾಗಲೇ ದೇಶ ಸೇವೆ ಮಾಡುವ ಮಹದಾಸೆಯಿಂದ 2002ರಲ್ಲಿ ಬಿಎಸ್ಎಫ್ ಸೇರಿದ್ದರು. ಕೋಲ್ಕತಾ, ಜಮ್ಮು & ಕಾಶ್ಮೀರ, ಅಸ್ಸೋಂ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತ, ಕಳೆದೊಂದು ವರ್ಷದಿಂದ ತ್ರಿಪುರದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೇನು ಮೂರು ತಿಂಗಳಲ್ಲಿ ಸೇನೆಯಿಂದ ನಿವೃತ್ತಿ ಆಗಬೇಕಿತ್ತು. ಅಷ್ಟರಲ್ಲೇ ಉಗ್ರರ ಗುಂಡಿಗೆ ಪ್ರಾಣತೆತ್ತಿದ್ದಾರೆ.