ಗೋಧಿಯಲ್ಲಿ ವಿಷ ಬೀಜ ಸೇರಿದ ಶಂಕೆ; ಒಂದೇ ಕುಟುಂಬದ ಏಳು ಮಂದಿ ಅಸ್ವಸ್ಥ | ಜನತಾ ನ್ಯೂಸ್
ಬೆಳಗಾವಿ : ಒಂದೇ ಕುಟುಂಬದ 7 ಮಂದಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ನರಸಾಪುರ ಗ್ರಾಮದ ದುಂಡವ್ವ ಮಹಾರುದ್ರಪ್ಪ ಕಡ್ಲೆಪ್ಪನವರ ಕುಟುಂಬದ 7 ಜನರೂ ವಿಷಾಹಾರ ಸೇವಿಸಿದ್ದಾರೆ.
ಗೋಧಿಯಿಂದ ಮಾಡಿದ ಚಪಾತಿ ಸೇವನೆ ಮಾಡಿ ಒಂದೇ ಕುಟುಂಬದ ತಾಯಿ ದುಂಡವ್ವ ಮಹಾರುದ್ರಪ್ಪ ಕಡ್ಲೆಪ್ಪನವರ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್ (8) ಮತ್ತು ಸಾಕ್ಷಿ (6) ಎಂಬುವರು ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿಯಾಗಿದೆ.
ಇನ್ನು, ಮೊದಲು ಪ್ರಾಥಮಿಕ ಚಿಕಿತ್ಸೆಗಾಗಿ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಹೆಚ್ಚುವರಿ ಚಿಕಿತ್ಸೆಗಾಗಿ ಎಲ್ಲರನ್ನೂ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಊಟದಲ್ಲಿ ಯಾವ ರೀತಿ ವಿಷ ಪದಾರ್ಥ ಸೇರಿದೆ ಎನ್ನುವುದಕ್ಕೆ ನಿಖರ ಮಾಹಿತಿ ಇಲ್ಲವಾದರೂ ಗೋಧಿಯಲ್ಲಿ ಮಿಶ್ರಿತವಾಗಿರಬಹುದು ಎಂಬ ಸಂದೇಹ ವ್ಯಕ್ತವಾಗಿದೆ. ಸೊಸೆ ಶಾಂತಾ ಕಡ್ಲೆಪ್ಪನವರ ಇತ್ತೀಚೆಗೆ ಧಾರವಾಡ ಜಿಲ್ಲೆಯ ತವರು ಮನೆಗೆ ಹೋಗಿದ್ದ ವೇಳೆ ಅಲ್ಲಿಂದ ಗೋಧಿ ತಂದಿದ್ದರು. ಆ ಗೋಧಿಯಲ್ಲಿ ಆಕಸ್ಮಿಕವಾಗಿ ಮದಗುಣಕಿ (ವಿಷದ) ಬೀಜಗಳು ಸೇರಿಕೊಂಡಿದ್ದೇ ಇದಕ್ಕೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.
ಮನೆಯಲ್ಲಿ ಚಪಾತಿ ಸೇವಿಸಿದ ನಂತರ ಎಲ್ಲರಿಗೂ ವಾಂತಿ ಬೇಧಿ ಶುರುವಾಗಿದ್ದು ಕೆಲವೇ ಸಮಯದಲ್ಲಿ ಅಸ್ವಸ್ಥಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಕುಟುಂಬಸ್ಥರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಯಾರಿಗೂ ಪ್ರಾಣಾಪಾಯವಿಲ್ಲ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.