ಜಮೀರ್ ಮನೆ ಮೇಲಿನ ಇಡಿ ದಾಳಿ ಹಿಂದೆ ಡಿಕೆಶಿ ಕೈವಾಡ ಏಕಿರಬಾರದು?: ಎಸ್.ಟಿ.ಸೋಮಶೇಖರ್ | ಜನತಾ ನ್ಯೂಸ್
ಮೈಸೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ ಯಾಕೆ ಶಾಸಕ ಜಮೀರ್ ಅಹ್ಮದ್ ಅವರ ಮನೆ ಮೇಲೆ ಇಡಿ ದಾಳಿ ಮಾಡಿಸಿರಬಾರದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ಇಂದು ಸಂಸದ ಶ್ರೀನಿವಾಸ್ ಪ್ರಸಾದ್ ಮನೆಗೆ ಭೇಟಿ ನೀಡಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಜಮೀರ್ ಅಹಮದ್ ಅವರು ಪದೇ ಪದೇ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುತ್ತಿದ್ದರು. ಈ ವಿಚಾರವನ್ನು ಜೀರ್ಣಿಸಿಕೊಳ್ಳಲು ಆಗದೇ ಡಿ.ಕೆ.ಶಿವಕುಮಾರ್ ಅವರೇ ಜಮೀರ್ ಮನೆ ಮೇಲೆ ಈ ದಾಳಿ ಮಾಡಿಸಿರಬಹುದು ಎಂದು ಆರೋಪಿಸಿದರು.
ಬಿಜೆಪಿ ಇಂತಹ ದಾಳಿ ಮಾಡಿಸುತ್ತಿದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ನಾವು ಡಿಕೆ ಶಿವಕುಮಾರ್ ಅವರ ಮೇಲೆಯೇ ಹೀಗೆ ಬೆರಳು ಮಾಡಬಹುದಲ್ವಾ? ಎಂದು ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಐಟಿ ಮತ್ತು ಇಡಿ ಅವರ ಕೆಲಸ ಅವರು ಮಾಡುತ್ತಾರೆ. ವ್ಯವಹಾರಗಳು ಸರಿಯಿದ್ದಾಗ ಯಾರು ಅದಕ್ಕೆ ಹೆದರುವ ಅಗತ್ಯವಿಲ್ಲ. ಐಟಿ, ಇಡಿ ಕೇಳುವ ದಾಖಲೆ ಕೊಟ್ಟರೆ ಮುಗಿಯಿತು. ಅದನ್ನು ಬಿಟ್ಟು ಇವರು ಬೇರೆ ರೀತಿಯೇ ಮಾತನಾಡುತ್ತಿದ್ದಾರೆ. ಇವರನ್ನು ನೋಡಿದರೆ ಏನೋ ವ್ಯವಹಾರ ಸರಿಯಿಲ್ಲ ಎನಿಸುತ್ತಿದೆ ಎಂದಿದ್ದಾರೆ.