SSLC ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿನಿ ಬಿಟ್ಟು ಎಲ್ಲರೂ ಪಾಸ್ | ಜನತಾ ನ್ಯೂಸ್
ಬೆಂಗಳೂರು : ಇಂದು ರಾಜ್ಯದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಿಸಿದ್ದಾರೆ. ಶೇ.99.9ರಷ್ಟು ಫಲಿತಾಂಶ ಹೊರಬಂದಿದೆ.ಕೋವಿಡ್ ಸವಾಲಿನ ಸಮಯದಲ್ಲಿ ಪರೀಕ್ಷೆ ಬರೆದ ಎಲ್ಲರನ್ನೂ ಪಾಸ್ ಮಾಡುವುದಾಗಿ ಮೊದಲೇ ಈ ಹಿಂದಿನ ಶಿಕ್ಷಣ ಸಚಿವರು ಭರವಸೆ ನೀಡಿದ್ದರು. ಅದರಂತೆ, ಒಬ್ಬ ವಿದ್ಯಾರ್ಥಿ ಹೊರತು ಪಡಿಸಿ ಎಲ್ಲರನ್ನು ಪಾಸ್ ಮಾಡಲಾಗಿದೆ.
ಒಬ್ಬಳೇ ಒಬ್ಬ ವಿದ್ಯಾರ್ಥಿನಿ ಬಿಟ್ಟು ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಆ ವಿದ್ಯಾರ್ಥಿ ತಾನು ಪರೀಕ್ಷೆ ಬರೆಯುವ ಬದಲು ಬೇರೆಯುವರು ಪರೀಕ್ಷೆ ಬರೆದ ಕಾರಣ ಒಬ್ಬ ವಿದ್ಯಾರ್ಥಿಯನ್ನು ಫೇಲು ಮಾಡಲಾಗಿದೆ, ಉಳಿದೆಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದರು.
ಒಟ್ಟು 8,71,443 ಮಕ್ಕಳು ಪರೀಕ್ಷೆ ಬರೆದಿದ್ದು, 8,71,442 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಂಪ್ಯೂಟರ್ ಮೌಲ್ಯಮಾಪನ ಮಾಡಲಾಗಿದ್ದು ಎಲ್ಲೂ ಲೋಪ ಆಗಿಲ್ಲ. 4,701,50 ವಿದ್ಯಾರ್ಥಿಗಳು, 4,01,281 ವಿದ್ಯಾರ್ಥಿನಿಯರು ಪಾಸ್ ಆಗಿದ್ದಾರೆ ಎಂದು ತಿಳಿಸಿದರು.
ಎ ಪ್ಲಸ್ ಗ್ರೇಡ್ನಲ್ಲಿ 1, 28, 931 ವಿದ್ಯಾರ್ಥಿಗಳು ಪಾಸಾಗಿದ್ದರೆ, ಎ ಗ್ರೇಡ್ನಲ್ಲಿ 2,50,317 ಲಕ್ಷ ಪಾಸಾಗಿದ್ದಾರೆ. ಬಿ ಅಲ್ಲಿ 2,87,684 ಲಕ್ಷ ವಿದ್ಯಾರ್ಥಿಗಳು, ಸಿ ಗ್ರೇಡ್ನಲ್ಲಿ 1,13,610 ಲಕ್ಷ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ ಶೇ.9ರಷ್ಟು ವಿದ್ಯಾರ್ಥಿಗಳು ಕೃಪಾಂಕ ಪಡೆದು ಪಾಸ್ ಆಗಿದ್ದಾರೆ, 13 ವಿದ್ಯಾರ್ಥಿಗಳಿಗೆ ವಿಷಯವೊಂದಕ್ಕೆ ಗರಿಷ್ಟ 28 ಕೃಪಾಂಕ ನೀಡಿ ಪಾಸ್ ಮಾಡಲಾಗಿದೆ ಎಂದು ತಿಳಿಸಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಹಾಜರಾತಿ 96.65 ರಷ್ಟು ಇತ್ತು. ಕಳೆದ ವಾರ್ಷಿಕ ಪರೀಕ್ಷೆಗಿಂತ ಹೆಚ್ಚು ಮಕ್ಕಳು ಈ ಸಲ ಹಾಜರಾಗಿದ್ದರು. ಇದೀಗ 8 ಲಕ್ಷಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದರು.
ಪ್ರಥಮ ಭಾಷೆ ಕನ್ನಡದಲ್ಲಿ 25,702 ಮಕ್ಕಳು 125ಕ್ಕೆ 125ಕ್ಕೆ ಅಂಕ ಪಡೆದಿದ್ದಾರೆ. ದ್ವಿತೀಯ 36,628 ವಿದ್ಯಾರ್ಥಿಗಳು, ತೃತೀಯ ಭಾಷೆ 36,776, ಗಣಿತ 6,321, ವಿಜ್ಞಾನ 3,649, ಸಮಾಜ ವಿಜ್ಞಾನ 9,367 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆದಿದ್ದಾರೆ.