ಖಾತೆ ಬೇಕು ಅಂತಾ ಬಯಸಿ, ಅಸಮಾಧಾನ ಸಹಜ.. ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು: ಬಿ.ಸಿ.ಪಾಟೀಲ್ | ಜನತಾ ನ್ಯೂಸ್
ಬೆಂಗಳೂರು : ನಿರ್ದಿಷ್ಟವಾಗಿ ಇಂತಹುದೇ ಖಾತೆ ಬೇಕು ಎಂಬ ಬೇಡಿಕೆಯಿಟ್ಟು, ಅಸಮಾಧಾನ ವ್ಯಕ್ತಪಡಿಸಿರುವುದು ಸರಿಯಲ್ಲ. ಕೊಟ್ಟಿರುವ ಖಾತೆಯನ್ನು ನಿಭಾಯಿಸಬೇಕು ಎಂದು ಸಚಿವರಾದ ಎಂ.ಟಿ.ಬಿ.ನಾಗರಾಜ್ ಮತ್ತು ಆನಂದ್ ಸಿಂಗ್ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಪರೋಕ್ಷವಾಗಿ ಕುಟುಕಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಇಂದು ಕಚೇರಿಗೆ ಪೂಜೆ ಮಾಡಿ, ಅಧಿಕೃತವಾಗಿ ಕೆಲಸ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಕೆಲಸವನ್ನು ಆರಂಭಿಸಿದ್ದೇನೆ. ನನಗೆ ಯಾವ ಖಾತೆ ಕೊಡುತ್ತೀರಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಕೇಳಿದ್ದೆ. ಕೃಷಿಗೆ ನಿನ್ನನ್ನು ಬಿಟ್ಟರೆ ಬೇರೆ ಯಾರೂ ಕಾಣುತ್ತಿಲ್ಲ ಅಂದಿದ್ದರು. ಸಂತೋಷದಿಂದ ನಾನು ಕೃಷಿ ಖಾತೆ ವಹಿಸಿಕೊಂಡಿದ್ದೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
"ಕೆಲವರು ತಮಗೆ ಇಂತಹದ್ದೇ ಖಾತೆ ಬೇಕು ಅಂತಾ ಬಯಸಿರುತ್ತಾರೆ. ಸಿಗದೇ ಇದ್ದಾಗ ಅಸಮಾಧಾನ ಸಹಜ. ಆದರೆ ಕೊಟ್ಟ ಖಾತೆಯಲ್ಲಿ ಕೆಲಸ ಮಾಡಬೇಕು" ಎಂದರು.
ನಾವು ಯಾವ ಖಾತೆಯಲ್ಲಿದ್ದರೂ ಅದು ಸರ್ಕಾರದ ಕೆಲಸ. ಆನಂದ್ ಸಿಂಗ್ಗೆ ಮೊದಲು ದೊಡ್ಡ ಖಾತೆಯನ್ನು ಕೊಟ್ಟಿದ್ದರು. ಆ ಖಾತೆಯನ್ನು ಕಿತ್ತುಕೊಂಡಿದ್ದಕ್ಕೆ ಅಸಮಾಧಾನವಾಗಿದೆ. ಖಾತೆ ದೊಡ್ಡದು ಅಂದರೆ ಹೆಚ್ಚು ಕೆಲಸ ಇರುತ್ತದೆ. ಅರಣ್ಯ ಖಾತೆ ಬಗ್ಗೆ ಏನು ಕನಸು ಕಂಡಿದ್ದರೆಂದು ಗೊತ್ತಿಲ್ಲ. 115+17 ಎರಡೂ ಸೇರಿದ್ದಕ್ಕೆ ಸರ್ಕಾರ ಸುಸೂತ್ರವಾಗಿದೆ. ಎರಡಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಅಸಮಾಧಾನ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಖಾತೆ ಹಂಚಿಕೆ ವೇಳೆ ಅಸಮಾಧಾನ ಸಹಜವಾಗಿ ಇರುತ್ತದೆ. ಸಿಎಂ ಬೊಮ್ಮಾಯಿ ಅಸಮಾಧಾನವನ್ನು ಸರಿಪಡಿಸುತ್ತಾರೆ. ಎಲ್ಲದಕ್ಕೂ ಸದ್ಯದಲ್ಲಿಯೇ ತೆರೆಬೀಳುತ್ತದೆ. ನಮ್ಮ ಮಿತ್ರಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಸಚಿವ ಆನಂದ್ ಸಿಂಗ್ ಜತೆ ನಾನು ಚರ್ಚೆ ಮಾಡಿದ್ದೇನೆ. ಸದ್ಯದಲ್ಲಿಯೇ ಎಲ್ಲಾ ಅಸಮಾಧಾನ ಬಗೆಹರಿಯುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.