ಜನಸೇವೆ ಮುಖ್ಯವೇ ಹೊರತು ಯಾವುದೋ ಇಲಾಖೆ ಮುಖ್ಯವಲ್ಲ: ಶ್ರೀ ರಾಮುಲು | ಜನತಾ ನ್ಯೂಸ್
ಬೆಂಗಳೂರು : ನನಗೆ ಖಾತೆ ಮುಖ್ಯ ಅಲ್ಲ.ಜನ ಸೇವೆಯೇ ಮುಖ್ಯ ಅಂತ ಸಾರಿಗೆ ಸಚಿವ ಶ್ರೀ ರಾಮುಲು ಹೇಳಿದ್ದಾರೆ. ನಮ್ಮಲ್ಲಿ ಬೆಂಕಿಯೂ ಇಲ್ಲ ಬಂಡಾಯವೂ ಇಲ್ಲ. ನನಗೆ ಯಾವ ಅಸಮಾಧಾನವೂ ಆಗಿಲ್ಲ. ಪಕ್ಷ ನೀಡಿರುವ ಜವಾಬ್ದಾರಿ ನಿರ್ವಹಿಸಿಕೊಂಡು ಹೋಗುತ್ತೇನೆ. ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಜನಪರ ಆಡಳಿತ ನೀಡುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದರು.
ನಮ್ಮದು ಶಿಸ್ತಿನ ಪಕ್ಷ. ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ವರಿಷ್ಠರು ಎಲ್ಲರೂ ಸೇರಿ ಒಳ್ಳೆಯ ನಿರ್ಧಾರವನ್ನು ಕೈಗೊಂಡಿದ್ದಾರೆ. ಬಿಜೆಪಿ ಯಾವತ್ತೂ ಜನಪರವಾದ, ಜನತೆಗೆ ಒಳ್ಳೆಯ ಆಡಳಿತ ನೀಡುವ ಸರ್ಕಾರವಾಗಿದೆ. ಹಾಗಾಗಿ, ಯಾವ ಇಲಾಖೆಯ ಜವಾಬ್ದಾರಿ ಕೊಟ್ಟಿದ್ದಾರೋ ಆ ಇಲಾಖೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವುದಕ್ಕೆ ನಮ್ಮ ಆದ್ಯತೆ ಎಂದರು.
ನನಗೆ ಸಾರಿಗೆ ಇಲಾಖೆ ಸಚಿವ ಸ್ಥಾನ ನೀಡಲಾಗಿದೆ. ಇಲ್ಲಿ ಜನಸೇವೆ ಮುಖ್ಯವೇ ಹೊರತು ಯಾವುದೋ ಇಲಾಖೆ ಮುಖ್ಯವಲ್ಲ. ಈ ಹಿಂದೆಯೂ ಇದನ್ನೇ ಹೇಳಿದ್ದೆ, ಈಗಲೂ ಇದನ್ನೇ ಹೇಳುತ್ತಿದ್ದೇನೆ. ನನಗೆ ಕೊಟ್ಟ ಜವಾಬ್ದಾರಿಯನ್ನು ಸಕ್ರಿಯವಾಗಿ ಜನರು ಮೆಚ್ಚುವ ರೀತಿ ಕೆಲಸ ಮಾಡುತ್ತೇನೆ.