ನಗರದಲ್ಲಿ ಝೀರೋ ಟ್ರಾಫಿಕ್ ಬೇಡ: ಝೀರೋ ಟ್ರಾಫಿಕ್ ಇಲ್ಲದೇ ಸಂಚರಿಸಿದ ಸಿಎಂ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರು ನಗರದಲ್ಲಿ ಮುಖ್ಯಮಂತ್ರಿಗಳು ಓಡಾಡುವಾಗ ಅವರ ಸುಗಮ ಸಂಚಾರಕ್ಕೆ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದ ಸಿಗ್ನಲ್ಗಳಲ್ಲಿ ವಾಹನ ಸವಾರರು ಹತ್ತಾರು ನಿಮಿಷ ಸುಮ್ಮನೆ ಕಾಯುವಂತಾಗುತ್ತದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗುತ್ತಿತ್ತು. ಈ ವ್ಯವಸ್ಥೆಗೆ ಮಂಗಳ ಹಾಡಲು ಸಿಎಂ ಬೊಮ್ಮಾಯಿ ನಿರ್ಧರಿಸಿದ್ದಾರೆ.
ತಾವು ನಗರದೊಳಗೆ ಸಂಚಾರ ಮಾಡುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವುದು ಬೇಡ. ಸಿಗ್ನಲ್ ಮುಕ್ತ ಸಂಚಾರ ಇರಿಸಿದರೂ ಸಾಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಅಲ್ಲದೆ, ತಾವು ಓಡಾಡುವ ವೇಳೆ ಆಂಬುಲೆನ್ಸ್ಗಳ ಸುಗಮ ಓಡಾಟಕ್ಕೆ ಅವಕಾಶ ನೀಡುವಂತೆಯೂ ಆದೇಶಿಸಿದ್ದಾರೆ ಎನ್ನಲಾಗಿತ್ತು.
ಮೌಖಿಕವಾಗಿ ಝೀರೋ ಟ್ರಾಫಿಕ್ ಬೇಡ ಎಂದು ಸಿಎಂ ಬೊಮ್ಮಾಯಿ ಈಗಾಗಲೇ ಸೂಚನೆ ನೀಡಿದ್ದಾರೆ. ಅದರಂತೆ ಇಂದು ಮುಖ್ಯಮಂತ್ರಿ ಪ್ರಯಾಣದ ವೇಳೆ ಜಂಕ್ಷನ್ ಟು ಜಂಕ್ಷನ್ ವಾಹನಗಳ ಕ್ಲಿಯರೆನ್ಸ್ಗೆ ಸೂಚನೆ ನೀಡಲಾಯಿತು.
ಸಿಎಂ ಹೊಗುವ ಹಾಗೂ ಬರುವ ಮುನ್ನ ವಾಕಿ ಟಾಕಿ ಮೂಲಕ ಸಂಚಾರಿ ಪೊಲೀಸರಿಗೆ ಸಿಗ್ನಲ್ ಕ್ಲಿಯರೆನ್ಸ್ ಮಾಡುವಂತೆ ಸೂಚನೆ ನೀಡಲಾಯಿತು. ಗೃಹ ಕಚೇರಿ ಕೃಷ್ಣಾದಿಂದಲೂ ಜಂಕ್ಷನ್ ಟು ಜಂಕ್ಷನ್ ಕ್ಲಿಯರೆನ್ಸ್ ಮಾಡಲಾಯಿತು. ನೈಸ್ ರಸ್ತೆ ಜಂಕ್ಷನ್ ಬಳಿ ಮಾತ್ರ ಸಾರ್ವಜನಿಕರ ವಾಹನಗಳನ್ನು ತಡೆ ಹಿಡಿಯಲಾಯಿತು.
ಸಂಚಾರಿ ಪೋಲೀಸರು ತಮ್ಮ ವಾಕಿ -ಟಾಕಿ ಮೂಲಕ ಸಂದೇಶ ರವಾನಿಸುವ ವೇಳೆ ಇನ್ಮುಂದೆ ನಿಮೋ ವನ್ ಮೂವ್ಮೆಂಟ್ ವೇಳೆ ಕೇವಲ ಜಂಕ್ಷನ್ ಟು ಜಂಕ್ಷನ್ ಕ್ಲಿಯರ್ ಇರಲಿ. ಕಂಪ್ಲೀಟ್ ಝೀರೋ ಕ್ಲಿಯರ್ ಇರೋದು ಬೇಡ. ಮೊದಲ ಆ್ಯಂಬುಲೆನ್ಸ್ ಗೆ ಕೊಡಿ. ಆ್ಯಂಬುಲೆನ್ಸ್ ಸಂಚಾರಕ್ಕೆ ಕ್ಲಿಯರ್ ಆದಮೇಲೆ ಸಿಎಂ ಮೂವ್ಮೆಂಟ್ ಮಾಡಿ ಎಂದು ಸೂಚಿಸಲಾಗಿದೆ ಎನ್ನಲಾಗಿದೆ.