ಮನೆಗೆ ಬಂದ ಸಿದ್ದರಾಮಯ್ಯ ಬಳಿ ಅವಲತ್ತುಕೊಂಡ ಜಮೀರ್! | ಜನತಾ ನ್ಯೂಸ್
ಬೆಂಗಳೂರು : ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಮನೆ ಮೇಲೆ ಇಡಿ ದಾಳಿ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಅವರ ಮನೆಗೆ ಭೇಟಿ ನೀಡಿದರು.
ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಳಿಕ ಜಮೀರ್ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದ ಸಿದ್ದರಾಮಯ್ಯ ಜಮೀರ್ ಮನೆಗೆ ಹೋಗಿ ಸಮಾಧಾನ ಪಡಿಸಿದ್ದಾರೆ.
ಜಾರಿ ನಿರ್ದೇಶನಾಲಯದ ದಾಳಿ ಬಳಿಕ ಇವರಿಬ್ಬರೂ ಒಟ್ಟಿಗೇ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹಲವು ಊಹಾಪೋಹ ಎದ್ದಿದ್ದವು. ಅದಕ್ಕೆಲ್ಲಾ ತೆರೆ ಎಳೆದಿರುವ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇಂದು ಮನೆಗೆ ಬಂದ ಸಿದ್ದರಾಮಯ್ಯನವರ ಬಳಿ ಜಮೀರ್ ನನ್ನ ತಪ್ಪು ತಿಳಿದುಕೊಳ್ಳಬೇಡಿ ಸರ್ ಎಂದು ಅವಲತ್ತುಕೊಂಡಿದ್ದಾರೆ. ನಾನು ಅಸಮಾಧಾನಕೊಂಡು ಮುನಿಸಿಕೊಂಡಿಲ್ಲ, ನಿನ್ನ ಬಗ್ಗೆ ನಾನು ತಪ್ಪು ತಿಳಿದುಕೊಂಡಿಲ್ಲ. ನೀನು ಟೆನ್ಷನ್ ಲ್ಲಿ ನೀವು ಇರ್ತಿರ ಎಂದು ಕರೆ ಮಾಡಲಿಲ್ಲ ಎಂದು ಜಮೀರ್ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಯಾವುದೇ ಅಸಮಾಧಾನ ಇಲ್ಲ ಎಂದು ಮೂರನೇ ಬಾರಿ ಹೇಳ್ತಿದ್ದೀಯಾ ನನಗೆ. ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದ ಜಮೀರ್ ಅವರನ್ನು ಸಿದ್ದರಾಮಯ್ಯ ಸಂತೈಸಿದ್ದಾರೆ. ಸರ್ ಐಎಂಎ ಕೇಸ್ ಲ್ಲಿ ನನ್ನ ಪಾತ್ರ ಇಲ್ಲ. ನನ್ನ ಮನೆ ಕಟ್ಟಿರುವುದು ಸಹ ಐಎಂಎ ಹಣದಿಂದ ಎಂದು ಅಪಪ್ರಚಾರ ಮಾಡ್ತಿದ್ದಾರೆ. ಇದೆಲ್ಲ ಸುಳ್ಳು ಎಂದು ಸಿದ್ದರಾಮಯ್ಯ ಅವರ ಬಳಿ ಜಮೀರ್ ಹೇಳಿಕೊಂಡಿದ್ದಾರೆ.
ಇಡಿ ಪ್ರಕರಣದ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೋ..ತಡ ಮಾಡಬೇಡ. ಬಿಜೆಪಿ ಇಡಿ ಬಳಸಿಕೊಂಡು ನಿನ್ನ ಮೇಲೆ ರೇಡ್ ಮಾಡಿಸಿದೆ. ಎಲ್ಲ ದಾಖಲೆ ಸರಿ ಮಾಡಿಕೋ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಜಮೀರ್ ನಿವಾಸದ ಪ್ರತ್ಯೇಕ ಕೊಠಡಿಯಲ್ಲಿ ಸಿದ್ದರಾಮಯ್ಯ, ಜಮೀರ್ ಹಾಗೂ ಶಾಸಕ ಭೈರತಿ ಬಸವರಾಜ್ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, "ಗೃಹ ಪ್ರವೇಶಕ್ಕೆ ಬರಲು ಆಗಿರಲಿಲ್ಲ. ನಿವಾಸಕ್ಕೆ ಬನ್ನಿ ಎಂದು ಜಮೀರ್ ಪದೇ ಪದೇ ಕರೆಯುತ್ತಿದ್ದರು. ನಿನ್ನೆ ಸಹ ಔತಣಕೂಟಕ್ಕೆ ಬನ್ನಿ ಎಂದು ಆಹ್ವಾನಿಸಿದ್ದರು" ಎಂದರು.
"ಇದೊಂದು ಖಾಸಗಿ ಭೇಟಿ. ಯಾವುದೇ ರಾಜಕೀಯದ ವಿಚಾರ ಮಾತನಾಡಿಲ್ಲ. ಮನೆಗೆ ಬಂದು ಊಟ ಮಾಡಿದ್ದೇನೆ. ಜಾರಿ ನಿರ್ದೇಶನಾಲಯ ದಾಳಿ ಮಾಡಿದ ವಿಚಾರವನ್ನು ಜಮೀರ್ ಮತ್ತು ಅವರ ವಕೀಲರು ನೋಡಿಕೊಳ್ಳುತ್ತಾರೆ" ಎಂದು ಸಿದ್ದರಾಮಯ್ಯ ಸಷ್ಟಪಡಿಸಿದರು.