ಬೆಂಗಳೂರಿನಲ್ಲಿ ಕಠಿಣ ನಿಯಮ: ಕುರಿತು ಮೂರ್ನಾಲ್ಕು ದಿನಗಳಲ್ಲಿ ಚರ್ಚೆ: ಆರ್ ಅಶೋಕ್ | ಜನತಾ ನ್ಯೂಸ್
ಬೆಂಗಳೂರು : ನಗರದಲ್ಲಿ ಶ್ರಾವಣ ಶನಿವಾರ ಸೇರಿದಂತೆ, ಸಾಲು - ಸಾಲು ಹಬ್ಬಗಳು ಬರಲಿದ್ದು, ಖರೀದಿಗಾಗಿ ಮಾರುಕಟ್ಟೆಗಳಲ್ಲಿ ಜನಜಂಗುಳಿ ಹೆಚ್ಚಾಗಲಿದೆ. ಹೀಗಾಗಿ ನಗರದಲ್ಲಿ ಕಠಿಣ ನಿಯಮಗಳು ಜಾರಿಯಾಗುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಕೊರೋನ ಪಾಸಿಟಿವಿಟಿ ಕಡಿಮೆ ಇದೆ. ಹೀಗಾಗಿ, ಲಾಕ್ಡೌನ್ ಮಾಡುವ ವಿಷಯವೇ ನಮ್ಮ ತಲೆಯಲ್ಲಿ ಇಲ್ಲ. ಆದರೆ, ನಾವು ಕೊರೋನ ಸೋಂಕಿನ ಪ್ರಕರಣಗಳು ಮಿತಿಮೀರಿದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ ಎಂದರು.
ನಗರದಲ್ಲಿ ಟಫ್ ರೂಲ್ಸ್ ಏನೇನು ತರಬೇಕು, ಹೇಗಿರಬೇಕೆಂಬ ನಿಯಮಗಳ ಬಗ್ಗೆ ಮೂರ್ನಾಲ್ಕು ದಿನಗಳಲ್ಲಿ ಸಿಎಂ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಗರದಲ್ಲಿ ಟಫ್ ರೂಲ್ಸ್ ತರಲೇಬೇಕಾಗುತ್ತದೆ. ಜನರ ಆರೋಗ್ಯ ಮುಖ್ಯ. ಹೀಗಾಗಿ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಹಿಂದೆ ನಡೆದ ದಸರಾ ಹಬ್ಬದ ಬಳಿಕವೂ ಕೊಂಚ ಮಟ್ಟಿಗೆ ಕೋವಿಡ್ ಪಾಸಿಟಿವಿಟಿ ಪ್ರಮಾಣವೂ ಏರಿಕೆಯಾಗಿತ್ತು. ಹಾಗಾಗಿ, ಮುಂದಿನ ದಿನಗಳಲ್ಲಿ ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಯಾವಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಮತ್ತು ಜನಸ್ನೇಹಿ ನಿರ್ಬಂಧನೆಗಳನ್ನೆ ಜಾರಿಗೆ ತರಲಾಗುವುದು ಎಂದು ಅಶೋಕ್ ಹೇಳಿದರು.