ಬೂದಿ ಕೊಟ್ಟ ಬಿಜೆಪಿಗೆ ಜನರ ಆಶೀರ್ವಾದ ಬೇಕಾ?: ಡಿ.ಕೆ. ಶಿವಕುಮಾರ್ ವ್ಯಂಗ್ಯ | ಜನತಾ ನ್ಯೂಸ್
ದೊಡ್ಡಬಳ್ಳಾಪುರ : ಕೋವಿಡ್ ಸಮಯದಲ್ಲಿ ಬೆಡ್, ಚಿಕಿತ್ಸೆ, ಔಷಧಿ, ಆಕ್ಸಿಜನ್, ಲಸಿಕೆ ನೀಡದೆ ಜನ ಸಾಯುವಂತೆ ಮಾಡಿ ಅವರಿಗೆ ಬೂದಿ ಕೊಟ್ಟಿರುವ ಬಿಜೆಪಿ ಸರಕಾರಕ್ಕೆ ಜನ ಆಶೀರ್ವಾದ ಮಾಡಬೇಕಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಬೆಂಗಳೂರು ಹೊರವಲಯದ ದೊಡ್ಡಬಳ್ಳಾಪುರದಲ್ಲಿ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅವಶ್ಯಕತೆ ಏನಿತ್ತು, ಅವರ ಮೇಲೆ ಏನಾದರೂ ಆರೋಪ ಇತ್ತಾ ಎಂದು ಪ್ರಶ್ನಿಸಿದರು. ರಾಜೀನಾಮೆ ನೀಡುವಾಗ ಬಿ.ಎಸ್.ಯಡಿಯೂರಪ್ಪ ಪಾಪ ಗಳಗಳನೆ ಅತ್ತರು. ಇದೆಲ್ಲಾ ನೋಡಿದರೆ ಜನಪರ ಸರ್ಕಾರ ನೀಡಲು ಇವರಿಂದ ಆಗಿಲ್ಲ ಎಂದು ಸಾಬೀತಾದಂತೆ ಆಯಿತು. ಕೋವಿಡ್ ಸರಿಯಾಗಿ ನಿರ್ವಹಣೆ ಮಾಡದ್ದಕ್ಕೆ ಕೇಂದ್ರ ಸರ್ಕಾರ ಕೇಂದ್ರ ಆರೋಗ್ಯ ಸಚಿವರನ್ನು ಬದಲಾವಣೆ ಮಾಡಿತು. ಇಲ್ಲೂ ಅಷ್ಟೇ ಅದಕ್ಕೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಡಿಕೆಶಿ ಕುಹಕವಾಡಿದರು.
ರಾಜ್ಯದ ಉದ್ದಗಲಕ್ಕೂ ಕೋವಿಡ್ ವಾರಿಯರ್ಸ್ ಗಳಿಗೆ ಗೌರವ ಸೂಚಿಸುವುದು ಕಾಂಗ್ರೆಸ್ ಕಾರ್ಯಕ್ರಮ. ಸೋಂಕಿನಿಂದ ಸತ್ತವರ ಕುಟುಂಬಕ್ಕೆ ಪರಿಹಾರ ಸಿಗುವಂತೆ ಮಾಡಬೇಕು. ಅದಕ್ಕೆ ಪೂರಕವಾಗಿ ಡೆತ್ ಆಡಿಟ್ ಮಾಡಿಸಿ, ಮಾಹಿತಿ ಸಂಗ್ರಹಿಸಲು ತಿಳಿಸಿದ್ದೇವೆ ಎಂದರು.
ಯಾವ ರೈತರಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ರೈತರ ವಿಚಾರದಲ್ಲಿ ಕೇವಲ ಮಾತನಾಡುತ್ತಿದ್ದಾರೆಯೇ ಹೊರತು ಯಾರಿಗೂ ನೆರವಾಗಿಲ್ಲ. ಸರಕಾರ ಒಂದೆರಡು ದಿನಗಳಲ್ಲಿ ಸದನ ಕರೆಯಬಹುದು, ಆಗ ಸರಕಾರ ಎಷ್ಟು ಜನರಿಗೆ ನೆರವು ನೀಡಿದೆ ಎಂದು ಲೆಕ್ಕ ನೀಡಲಿ ಎಂದು ಶಿವಕುಮಾರ್ ತಿಳಿಸಿದರು.
ಬಿಜೆಪಿಯವರು ತಮ್ಮ ಸಭೆಗಳಿಗೆ ಮಾತ್ರ ಯಾಕೆ ವಿನಾಯಿತಿ ಕೊಟ್ಟುಕೊಂಡಿದ್ದಾರೆ. ಬೇರೆಯವರಿಗೆ ಯಾಕೆ ಅವಕಾಶ ನೀಡುತ್ತಿಲ್ಲ. ರಾಜಕೀಯ ಸಭೆ ಮಾಡಬಾರದು ಎಂದು ಸರಕಾರ ಹೇಳುತ್ತದೆ. ಮತ್ತೊಂದು ಕಡೆ ಕೇಂದ್ರ ಸಚಿವರು ಜನಾಶೀರ್ವಾದ ಸಭೆ ಮಾಡುತ್ತಿದ್ದಾರೆ. ಅವರು ಯಾವ ಸಭೆಯಾದರೂ ಮಾಡಿಕೊಳ್ಳಲಿ. ಸರಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ತಾರತಮ್ಯ ಮಾಡುತ್ತಿದೆ. ಕೋವಿಡ್ ನಿಯಮಾವಳಿ ಏನು ಬೇಕಾದರೂ ಮಾಡಲಿ. ಆದರೆ ಅದು ಎಲ್ಲರಿಗೂ ಅನ್ವಯವಾಗಬೇಕು ಎಂದು ಅವರು ಹೇಳಿದರು.
ಆಕ್ಸಿಜನ್ ದುರಂತದಲ್ಲಿ ಸತ್ತವರು ಕೇವಲ 3 ಜನ ಎಂದು ಸಚಿವರು ಹೇಳಿದರು. ಆಮೇಲೆ ನಾನು ಹಾಗೂ ಸಿದ್ದರಾಮಯ್ಯ ಅವರು ಹೋಗಿ ನೋಡಿದರೆ 36 ಜನ ನರಳಿ ಸತ್ತಿದ್ದಾರೆ. ನಾವು ಅಷ್ಟೂ ಕುಟುಂಬಗಳಿಗೆ ಭೇಟಿ ನೀಡಿ ತಲಾ ಒಂದು ಲಕ್ಷ ರುಪಾಯಿ ಹಣ ಕೊಟ್ಟು ಬಂದಿದ್ದೇವೆ. ಹೀಗೆ ನಾವು ಜನಪರ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.
ಆಕ್ಸಿಜನ್, ಬೆಡ್, ಔಷಧಿ, ಲಸಿಕೆ ಎಲ್ಲದಕ್ಕೂ ಕ್ಯೂ ನಿಲ್ಲಿಸಿದ್ದಾರೆ. ಅವರು ಹೆಣ ಸುಡಲು ಸಾಧ್ಯವಾಗಲಿಲ್ಲ. ನಾನು ಸರಕಾರಕ್ಕೆ ಉಗಿದ ಮೇಲೆ ಹೊರವಲಯದಲ್ಲಿ ತಾತ್ಕಾಲಿಕ ಚಿತಾಗಾರ ನಿರ್ಮಿಸಿದರು. ಸೋಂಕಿನಿಂದ ಸತ್ತವರಿಗೆ ಕೋವಿಡ್ ಮರಣ ಎಂದು ಪ್ರಮಾಣ ಪತ್ರ ನೀಡಲಾಗಿಲ್ಲ. ಮನೆಯಲ್ಲಿ, ರಸ್ತೆಯಲ್ಲಿ ಸತ್ತವರ ಕುಟುಂಬಗಳಿಗೆ ಇದುವರೆಗೂ ಮರಣ ಪ್ರಮಾಣ ಪತ್ರ ನೀಡಿಲ್ಲ. ಅವರಿಗೆ ಮರಣ ಪ್ರಮಾಣ ಪತ್ರ ಕೊಡಿಸುವುದು ನಿಮ್ಮ ಜವಾಬ್ದಾರಿ. ನಾವು ಹೋರಾಟ ಮುಂದುವರಿಸಿ, ನಿಮಗೆ ಪರಿಹಾರ ಸಿಗುವಂತೆ ಮಾಡುತ್ತೇವೆ ಎಂದು ಅವರು ಹೇಳಿದರು.
ಪಕ್ಷದ ಕರೆ ಮೇರೆಗೆ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. 2.5 ಕೋಟಿ ಜನರಿಗೆ ನೆರವಾಗಿದ್ದಾರೆ. ಇಡೀ ದೇಶದಲ್ಲಿ ಉದ್ಯೋಗ, ಆಸ್ತಿ ಕಳೆದುಕೊಂಡವರು ಬಹಳಷ್ಟು ಜನರಿದ್ದಾರೆ. ಯಾರಿಗೂ ಸರ್ಕಾರ ತೆರಿಗೆ ಕಡಿಮೆ ಮಾಡಿಲ್ಲ. ಸಣ್ಣ ಪರಿಹಾರವನ್ನೂ ನೀಡಲಿಲ್ಲ. ಅವರಿಗೆ ಕೊಟ್ಟಿದ್ದು ಕೇವಲ ಬೂದಿ. ಈಗ ಬಿಜೆಪಿಯವರು ಜನಾಶೀರ್ವಾದ ಅಂತಾ ಮಾಡುತ್ತಿದ್ದಾರೆ. ನೀವು ಬೂದಿ ಕೊಟ್ಟಿದ್ದಕ್ಕೆ ಜನ ನಿಮಗೆ ಆಶೀರ್ವಾದ ಮಾಡುತ್ತಾರಾ? ಎಂದು ವ್ಯಂಗ್ಯವಾಡಿದರು.
ಭಗವಂತ ಖೂಬಾ ಸ್ವಾಗತಕ್ಕೆ ಬಂದೂಕು ಬಳಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಂದೂಕಿಗೆ ಲೈಸೆನ್ಸ್ ಕೊಟ್ಟವರು ಯಾರು? ಯಾಕೆ ಇನ್ನೂ ಅವರನ್ನು ಅರೆಸ್ಟ್ ಮಾಡಿಲ್ಲ, ಯಾಕೆ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಮಂತ್ರಿಗೇ ಒಂದು ಕಾನೂನಾ. ಕ್ರಮ ಕೈಗೊಳ್ಳಲು ಸಿಎಂ ಬಸವರಾಜ್ ಬೊಮ್ಮಾಯಿಗೆ ಎಲ್ಲಿದೆ ಶಕ್ತಿ ಎಂದು ಪ್ರಶ್ನಿಸಿದರು. ಹೋಂ ಮಿನಿಷ್ಟರ್ ಗೆ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಿ ಹೋಗಲಿ.ಬೇರೆ ಯಾವುದಾದರೂ ಖಾತೆ ತೆಗೆದುಕೊಂಡು ಹೋಗಲಿ. ಪಾಪಾ ಇನ್ನೂ ಹೊಸದು ಆಗಲ್ಲ ಅವರ ಕೈಯಲ್ಲಿ. ಯಾವುದೋ ಒತ್ತಡದಲ್ಲಿ ಖಾತೆ ನೀಡಿದ್ದಾರೆ. ಯಾರಿಗೇ ಬೇಕಾದರೂ ಕೊಟ್ಟಿಕೊಳ್ಳಲಿ ನಮಗೆ ಚಿಂತೆಯಿಲ್ಲ ಎಂದರು.