ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಭೇಟಿ ನೀಡಲು ಅನುಮತಿ ನೀಡಿದ ಸುಪ್ರಿಂಕೋರ್ಟ್ | ಜನತಾ ನ್ಯೂಸ್
ನವದೆಹಲಿ : ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಕರ್ನಾಟಕದ ಮಾಜಿ ಸಚಿವ ಮತ್ತು ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆ ಮತ್ತು ಆಂಧ್ರಪ್ರದೇಶದ ಕಡಪ ಹಾಗೂ ಅನಂತಪುರಂಗೆ ಭೇಟಿ ನೀಡಲು ಮತ್ತು ಉಳಿಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
2011ರ ಸೆಪ್ಟೆಂಬರ್ನಲ್ಲಿ ಅವರನ್ನು ಬಂಧಿಸಲಾಗಿತ್ತು. ಬಳಿಕ 2015ರಲ್ಲಿ ಅವರಿಗೆ ಜಾಮೀನು ನೀಡಿದ್ದರೂ, ರಾಜ್ಯದ ಗಡಿ ಭಾಗದಲ್ಲಿರುವ ಬಳ್ಳಾರಿಗೆ ಭೇಟಿ ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಬಳಿಕ ಗಾಲಿ ಜನಾರ್ಧನ್ ರೆಡ್ಡಿ ತಮ್ಮ ಊರಾದ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ಕೋರಿದ್ದರು, ಅನೇಕ ವರ್ಷಗಳ ನಂತರ ಇಂದು ಅನುಮತಿ ನೀಡಲಾಗಿದೆ.
ಪಟ್ಟಣಕ್ಕೆ ಭೇಟಿ ನೀಡಲು ಅನುಮತಿ ಕೋರಿದ ರೆಡ್ಡಿ ಮನವಿಯನ್ನು, ಬಳ್ಳಾರಿಯ ನಿವಾಸಿಗಳಾದ ಪ್ರಕರಣದ ಎಲ್ಲಾ 47 ಸಾಕ್ಷಿಗಳ ಜೀವಕ್ಕೆ ಗಂಭೀರ ಬೆದರಿಕೆ ಹಾಕುತ್ತಾರೆ, ಎಂದು ಆರೋಪಿಸಿ, ಕೇಂದ್ರ ತನಿಖಾ ದಳವು(ಸಿಬಿಐ) ವಿರೋಧಿಸಿತ್ತು. ಅಲ್ಲದೇ, ಇದು ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಅದು ಹೇಳಿದೆ.
"ಅತ್ಯಂತ ಕುಖ್ಯಾತ ಗಣಿ ಹಗರಣ" ಎಂದು ಕರೆಯಲ್ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧನಕ್ಕೊಳಗಾದ ನಂತರ 2015ರ ಜನವರಿಯಿಂದ ಜಾಮೀನಿನ ಮೇಲೆ ಹೊರಬಂದಿದ್ದ ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂ ಕೋರ್ಟ್ ಇಂದು ಸ್ವಲ್ಪ ಹೆಚ್ಚಿನ ಪರಿಹಾರವನ್ನು ನೀಡಿದೆ. ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿ, ರಾಜ್ಯ ರಾಜಧಾನಿ ಬೆಂಗಳೂರಿನಿಂದ ಉತ್ತರಕ್ಕೆ 300 ಕಿಲೋಮೀಟರುಗಳಷ್ಟು ದೂರದಲ್ಲಿರುವ ಅವರ ಊರಾದ ಬಳ್ಳಾರಿಯಲ್ಲಿ ಉಳಿಯಲು ನ್ಯಾಯಾಲಯವು ಅನುಮತಿ ನೀಡಿತು.
ಗಣಿಗಾರಿಕೆ ಉದ್ಯಮಿ ಆಗಿರುವ ರಾಜಕಾರಣಿ ಪಟ್ಟಣಕ್ಕೆ ಭೇಟಿ ನೀಡುವಾಗ ಮತ್ತು ಅದನ್ನು ತೊರೆಯುವಾಗ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಬೇಕು, ಎಂದು ಸುಪ್ರೀಂ ಕೋರ್ಟ್ ಹೇಳಿದೆ.
"ಪ್ರಕರಣದಲ್ಲಿ ವಿಚಾರಣೆ ಕೂಡ ಆರಂಭವಾಗಿಲ್ಲ ಮತ್ತು ಅರ್ಜಿದಾರರು ಇದುವರೆಗೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ. ಆದ್ದರಿಂದ, ಅವರಿಗೆ ಬಳ್ಳಾರಿಗೆ ಹೋಗಲು ಅನುಮತಿ ಇದೆ ... ಏತನ್ಮಧ್ಯೆ, ವಿಚಾರಣಾ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ತ್ವರಿತಗೊಳಿಸಬಹುದು" ಎಂದು ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ದಿನೇಶ್ ಮಹೇಶ್ವರಿ ನ್ಯಾಯಾಧೀಶರ ಪೀಠ ಇಂದು ಹೇಳಿದೆ.