ಜೈಲಿನಿಂದ ವಿನಯ ಕುಲಕರ್ಣಿ ಬಿಡುಗಡೆ, ರಾಖಿ ಕಟ್ಟಿ, ಹಣೆಗೆ ತಿಲಕ ಇಟ್ಟು ಸ್ವಾಗತಿಸಿದ ಲಕ್ಷ್ಮಿ ಹೆಬ್ಬಾಳ್ಕರ್! | ಜನತಾ ನ್ಯೂಸ್
ಬೆಳಗಾವಿ : ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ರಾಖಿ ಕಟ್ಟಿ, ಹಣೆಗೆ ತಿಲಕ ಇಟ್ಟು ಸಿಹಿ ತಿನ್ನಿಸಿ ಸ್ವಾಗತಿಸಿದ್ದಾರೆ.
ಜೈಲಿನಿಂದ ಹೊರಬಂದ ವಿಜಯ್ ಕುಲಕರ್ಣಿಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರಿಂದ ಭರ್ಜರಿ ಸ್ವಾಗತ ಸಿಕ್ಕಿದ್ದು, ಜೈಲು ಆವರಣದಲ್ಲಿ ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತ್ತು.
ಬಿಡುಗಡೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜಕೀಯ ಕುತಂತ್ರದಿಂದ ನಾನು ಜೈಲು ಸೇರಿದೆ ಎನ್ನುತ್ತಾ ಭಾವುಕರಾದರು. ನನಗೆ ನ್ಯಾಯಾಲಯದ ಮೇಲೆ ವಿಶ್ವಾಸವಿತ್ತು. ನಾನು ಜೈಲಿನಿಂದ ಹೊರಬರುತ್ತೇನೆಂದು ತಿಳಿದಿತ್ತು. ಜೈಲಿಗೆ ಬಂದಮೇಲೆ ನನ್ನಲ್ಲಿ ತುಂಬಾ ಬದಲಾವಣೆಯಾಗಿದೆ. ನಾನು ಓದುವ ಹವ್ಯಾಸ ಬೆಳಸಿಕೊಂಡಿದ್ದೆನೆ. ಇನ್ನು ಮುಂದೆ ನನ್ನ ರಾಜಕೀಯ ಹೆಜ್ಜೆಗಳನ್ನು ಬಹಳ ಎಚ್ಚರಿಕೆಯಿಂದ ಇಡುತ್ತೇನೆ ಎಂದು ತಿಳಿಸಿದರು.
ಒಟ್ಟು 9 ತಿಂಗಳು 16 ದಿನಗಳ ಸೆರೆವಾಸವನ್ನು ಮುಗಿಸಿದ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಜೈಲಿನ ಮುಂದೆ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಬಳಿಕ ತೆರೆದ ವಾಹನದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೆರವಣಿಗೆ ಕರೆದೊಯ್ಯಲಾಯಿತು.
ಇದೀಗ ಜೈಲಿನಿಂದ ಹೊರಬಂದ ವಿನಯ್ ಕುಲಕರ್ಣಿಗೆ ಬೆಳಗಾವಿ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಗಾವಿ ಗ್ರಾಮಾಂತರ ಪೊಲೀಸ್ರಿಂದ ವಿನಯ್ ಕುಲಕರ್ಣಿ ಸೇರಿ 12 ಜನರ ಮೇಲೆ ಸುಮೋಟೋ ಕೇಸ್ ದಾಖಲಿಸಿದ್ದಾರೆ.
"ಕೋವಿಡ್ ನಿಯಮ, ವಾರಾಂತ್ಯ ಕರ್ಫ್ಯೂ ಇದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಜನರು ದೈಹಿಕ ಅಂತರ ಮರೆದು, ಮಾಸ್ಕ್ ಧರಿಸದೆ ಮೆರವಣಿಗೆಯಲ್ಲಿ ಭಾಗವಹಿಸಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ."