ಪಿಸ್ತೂಲು ಸ್ವಚ್ಛಗೊಳಿಸುವಾಗ ಮಿಸ್ ಫೈರ್, ಪೇದೆ ಸಾವು | ಜನತಾ ನ್ಯೂಸ್
ದಾವಣಗೆರೆ : ಪಿಸ್ತೂಲ್ ಸ್ವಚ್ಛಗೊಳಿಸುವ ವೇಳೆ ಆಕಸ್ಮಿಕವಾಗಿ ಪಿಸ್ತೂಲ್ನಿಂದ ಗುಂಡು ಹಾರಿದ್ದು, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಸ್ಟೇಬಲ್ ಮೃತಪಟ್ಟ ದುರ್ಘಟನೆ ದಾವಣಗೆರೆಯ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯಲ್ಲಿ ನಡೆದಿದೆ.
ಚೇತನ್ (28) ಸಾವನ್ನಪ್ಪಿದ ಪೊಲೀಸ್ ಕಾನ್ಸ್ಟೇಬಲ್. ಬೆಳಗ್ಗೆಯ ತರಬೇತಿ ಮುಗಿಸಿ ಆಯುಧ ಸ್ವಚ್ಛ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಫೈರಿಂಗ್ ಆಗಿ ಗುಂಡು ತಗುಲಿದೆ. ಘಟನೆ ಬಳಿಕ ತುರ್ತಾಗಿ ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಚೇತನ್ ಅವರನ್ನು ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದ ನಿವಾಸಿಯಾಗಿದ್ದ ಚೇತನ್, 2012ರಲ್ಲಿ ದಾವಣಗೆರೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಸೇರಿದ್ದರು. 5 ವರ್ಷಗಳ ಹಿಂದೆಯಷ್ಟೆ ಮದುವೆಯಾಗಿದ್ದ ಚೇತನ್ ಗೆ ಒಂದು ಗಂಡು ಮಗುವಿದ್ದು, ಕುಟುಂಬಸ್ಥರಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಪೂರ್ವ ವಲಯ ಐಜಿಪಿ ಎಸ್ ರವಿ ಹಾಗೂ ಎಸ್ಪಿ ಸಿಬಿ ರಿಷ್ಯಂತ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.