ರೈತ ಮಕ್ಕಳಿಗೆ ಶಿಷ್ಯವೇತನ ಯೋಜನೆ "ಮುಖ್ಯಮಂತ್ರಿ ವಿದ್ಯಾನಿಧಿ"ಗೆ ಚಾಲನೆ! | ಜನತಾ ನ್ಯೂಸ್
ಬೆಂಗಳೂರು : ರೈತ ಮಕ್ಕಳಿಗೆ ಶಿಷ್ಯವೇತನ ಯೋಜನೆಯಾದ "ಮುಖ್ಯಮಂತ್ರಿ ವಿದ್ಯಾನಿಧಿ" ಲೋಕಾರ್ಪಣೆ ಕಾರ್ಯಕ್ರಮ ಇಂದು ಬೆಳಗ್ಗೆ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರುಗಿತು.
ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಶಿಷ್ಯ ವೇತನ ನೀಡಲಿದ್ದು, ಇಂದು ಸಾಂಕೇತಿಕವಾಗಿ ಕೆಲವು ರೈತರ ಮಕ್ಕಳಿಗೆ ಚೆಕ್ ವಿತರಣೆ ಮಾಡಲಾಗಿದೆ.ಯೋಜನೆಗೆ ಬಟನ್ ಒತ್ತುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಕೃಷಿ ಬೆಳೆದಿದೆ. ಆದರೆ, ಕೃಷಿಯನ್ನು ಬೆಳೆಸಿದ ರೈತ ಸಂಕಷ್ಟದಲ್ಲಿದ್ದಾನೆ. ಕೃಷಿ ಅಭಿವೃದ್ಧಿ ಜೊತೆಗೆ ಸರ್ಕಾರಗಳು ರೈತರ ಅಭಿವೃದ್ಧಿ ಪಡಿಸುವ ಚಿಂತನೆ ಮಾಡುವ ಅವಶ್ಯಕತೆ ಇದೆ. ಯಾಕೆಂದರೆ, ರೈತ ಉಳಿದರೆ ಕೃಷಿ ಉಳಿಯುತ್ತದೆ. ಹಾಗಾಗಿ, ರೈತನ ಶ್ರಮಕ್ಕೆ, ಆತನ ಬೆವರಿಗೆ ಸರಿಯಾದ ಬೆಲೆ ಕೊಡುವ ಕಾಲ ಬಂದಿದೆ ಎಂದು ತಿಳಿಸಿದರು.
ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳುವುದು ಧೈರ್ಯದ ಮಾತು. ಅಂಥ ಧೈರ್ಯವನ್ನು ಮೋದಿಯವರು ತೋರಿದ್ದಾರೆ. ಮೋದಿಯವರಂಥ ಮುತ್ಸದ್ಧಿ ರಾಜಕಾರಣಿ ನಮಗೆ ಸಿಕ್ಕಿದ್ದಾರೆ. ಯೋಜನೆಗಳು ಮೊದಲು ಮನಸ್ಸಿನಲ್ಲಿ ತಯಾರಾಗುತ್ತವೆ. ಬಳಿಕ ಕಾರ್ಯರೂಪಕ್ಕೆ ಬರುತ್ತವೆ. ರೈತರ ಆದಾಯ ಎರಡು ಪಟ್ಟು ಆಗಬೇಕು ಅನ್ನೋದು ಪ್ರಧಾನಿಯವರ ವಿನೂತನ ಯೋಚನೆ.
ಈ ಯೋಚನೆಗೆ ಬಹಳಷ್ಟು ಧೈರ್ಯ ಬೇಕು ಎಂದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಇದು ಅಷ್ಟು ಸುಲಭವಾಗಿ ಸಾಧ್ಯವಾಗಿಲ್ಲ. ರಾಜಕಾರಣಿಗಳು ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟಿರ್ತಾರೆ. ಒಬ್ಬ ಮುತ್ಸದ್ಧಿ ಮುಂದಿನ ಜನಾಂಗದ ಮೇಲೆ ಕಣ್ಣು ನೆಟ್ಟಿರ್ತಾನೆ. ಅಂಥ ಮುತ್ಸದ್ಧಿ ರಾಜಕಾರಣಿ ಮೋದಿಯವರು ಎಂದರು.
ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಚೆಕ್ ವಿತರಿಸಿ ಮಾತನಾಡಿದ ಕೇಂದ್ರ ಕೃಷಿ ಕಲ್ಯಾಣ ರೈತ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ದೇಶದ ಯಾವುದೇ ಯೋಜನೆಯಾಗಲೀ ಅದರ ರೂವಾರಿ ಕರ್ನಾಟಕ. ಕಿಸಾನ್ ಬಜೆಟ್ ಮಂಡಿಸಿದ ಮೊದಲ ಹೆಗ್ಗಳಿಕೆ ಮಾಜಿ ಸಿಎಂ ಯಡಿಯೂರಪ್ಪರದ್ದಾಗಿದೆ. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸಹಾಯಧನ ವಿದ್ಯಾರ್ಥಿವೇತನ ನೀಡುವ ದೇಶದ ಮೊದಲ ಯೋಜನೆ ವಿದ್ಯಾನಿಧಿ ಎಂದು ಶ್ಲಾಘಿಸಿದ್ದಾರೆ.
ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ವಿದ್ಯಾರ್ಥಿಗಳ ಖಾತೆಗೆ ವಿದ್ಯಾನಿಧಿ ಹಣವನ್ನು ಸಾಂಕೇತಿಕವಾಗಿ ವರ್ಗಾವಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವರಾದ ಮುನಿರತ್ನ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಸಂಸದರು, ಶಾಸಕರು ಭಾಗಿಯಾಗಿದ್ದರು.