ಜನರ ಹಣ ಜನರಿಗೆ ಕೊಡಲು ನಿಮಗೆ ಹೊಟ್ಟೆ ಉರಿ ಏಕೆ? | ಜನತಾ ನ್ಯೂಸ್
ಬೆಂಗಳೂರು : ಜನರ ಹಣ ಜನರಿಗೆ ಕೊಡಲು ನಿಮಗೆ ಹೊಟ್ಟೆ ಉರಿ ಏಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ, ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಹೋಗಿದ್ದಾರೆ. ಅವನ್ಯಾರೋ ಸಿಟಿ ರವಿ ಎಂದು ಹೇಳಿದ್ರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅವನು ಅಯೋಗ್ಯ ಎಂದರು. ಇದಕ್ಕೆ ಸಿದ್ಧರಾಮಯ್ಯನವ್ರು ನಾನು ಅಂತಹ ಪದ ಬಳಸಬಾರದು ಸುಮ್ಮನಿರಪ್ಪ ಎಂದು ಹೇಳಿದರು.
ಇನ್ನು ಮಾತು ಮುಂದುವರೆಸಿದ ಸಿದ್ದರಾಮಯ್ಯ, ಸಿಟಿ ರವಿಗೆ ಅವರ ನಾಯಕನ ಹೆಸರನ್ನು ಇಡಬಹುದು. ನಮ್ಮ ನಾಯಕರ ಹೆಸರು ಇಟ್ಟರೆ ಇವ್ರಿಗೆ ಹೊಟ್ಟೆ ಉರಿ ಎಂದು ಕಿಡಿಕಾರಿದರು.
ಆಹಾರ ಸಚಿವ ಕತ್ತಿ ಇದ್ದಾನೆ. ಅವನು ಒಬ್ಬರಿಗೆ ನಾಲ್ಕು ಕೆಜಿ ಅಕ್ಕಿ ಸಾಕು ಎಂದು ಹೇಳ್ತಾನೆ. ಇವನಿಗೇನೋ ಸಕ್ಕರೆ ಖಾಯಿಲೆ ಇರಬಹುದು. ಬೇರೆಯವರಿಗೆ ನಾಲ್ಕು ಕೆಜಿ ಸಾಲುತ್ತಾ ಎಂದು, ಒಬ್ಬರಿಗೆ ತಿಂಗಳಿಗೆ ಐದು ಕೆಜಿ ಅಕ್ಕಿ ಸಾಕು ಎಂದಿದ್ದ ಸಚಿವ ಉಮೇಶ್ ಕತ್ತಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿದರು.
ಆರೋಗ್ಯ ಸಚಿವರಿಗೆ ಕೋವಿಡ್ ಸೋಂಕಿತರಿಗೆ ಬೆಡ್ ಸಹ ನೀಡಲು ಆಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ಜನರು ಸತ್ತರೆ, ಅದರ ಬಗ್ಗೆ ಸಹ ಸುಳ್ಳು ಮಾಹಿತಿ ಕೊಡುತ್ತಾರೆ. ಇದಕ್ಕೆ ನ್ಯಾಯಾಲಯ ಕೂಡಾ ಛೀಮಾರಿ ಹಾಕಿದೆ ಎಂದು ಟೀಕಿಸಿದರು.
ಭಾರತೀಯ ಜನತಾ ಪಕ್ಷದವರು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಜನರಿಗೆ ಅರ್ಥ ಮಾಡಿಸಬೇಕು. ಹಿಂಬಾಗಿಲಿನಿಂದ ಬಂದ ಯಡಿಯೂರಪ್ಪ ಅವರನ್ನು ಬಿಜೆಪಿ ಅವರೇ ಕಳಿಸಿದ್ದಾರೆ. ಇವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದರು.