ರಾಸಾಯನಿಕ ಕಂಪೆನಿಯಲ್ಲಿ ಬಾಯ್ಲರ್ ಸ್ಫೋಟ, 7 ಜನರಿಗೆ ಗಂಭೀರ ಗಾಯ! | ಜನತಾ ನ್ಯೂಸ್
ಬೆಂಗಳೂರು : ದೇವರಚಿಕ್ಕನಹಳ್ಳಿಯಲ್ಲಿನ ಆಶ್ರಿತ್ ಆಯಸ್ಪೈರ್ ಅಪಾರ್ಟ್ಮೆಂಟ್ ಅಗ್ನಿ ದುರಂತ ಮತ್ತು ನ್ಯೂ ತರಗುಪೇಟೆ ಬಳಿ ಶ್ರಿ ಮಹಾಕಾಳಿ ಅಮ್ಮನ್ ಲಾರಿ ಸರ್ವೀಸ್ ಗೋದಾಮಿನಲ್ಲಿ ಪಟಾಕಿ ಸ್ಫೋಟ ದುರಂತ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
ಆನೇಕಲ್ ನ ಅತ್ತಿಬೆಲೆ ಬಳಿಯ ಲೇಟ್ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ. ಬಾಯ್ಲರ್ ಸ್ಫೋಟದಿಂದ ಹೊಗೆ 3 ಕಿ.ಮೀ ವ್ಯಾಪಿಸಿದೆ. ಈಗಾಗಲೇ 7 ಮಂದಿಗೆ ಗಾಯಗೊಂಡಿದ್ದು, ಓರ್ವ ಸಾವಿನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಕೆಮಿಕಲ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟದಿಂದ ಗಾಳಿಯಲ್ಲಿ ಗಬ್ಬು ವಾಸನೆ ಉಂಟಾಗಿದ್ದು, ಕೆಮಿಕಲ್ ವಾಸನೆಗೆ ಹೆದರಿ ಜನರು ಫ್ಯಾಕ್ಟರಿ ಸಮೀಪಕ್ಕೆ ತೆರಳಲು ಹೆದರುತ್ತಿದ್ದಾರೆ.
ಬಾಯ್ಲರ್ ಸ್ಫೋಟದಿಂದ ಬೆಂಕಿ ಹೊತ್ತುಕೊಂಡಿದ್ದು, ಹರಸಾಹಸ ಮಾಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್ಗೆ ಇಡೀ ಪ್ರದೇಶದಲ್ಲಿ ಕೆಮಿಕಲ್ ವಾಸನೆ ಹರಡಿದೆ. ಉಸಿರು ತೆಗೆದುಕೊಳ್ಳಲೂ ಸ್ಥಳೀಯರು ಯೋಚಿಸುವಂತಾಗಿದೆ.
ಕೂಡಲೇ ಕಂಪನಿ ಸ್ಥಳಾಂತರಿಸಲು ಸ್ಥಳೀಯರು ಆಗ್ರಹಿಸಿದ್ದಾರೆ. ಲೇಕ್ ಕೆಮಿಕಲ್ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಜಮಾಯಿಸಿದ ಜನರನ್ನು ಪೊಲೀಸರು ಚದುರಿಸಿದ್ದಾರೆ. ಬಾಯ್ಲರ್ ಬ್ಲಾಸ್ಟ್ನಿಂದ ಮೂರು ನಾಲ್ಕು ಕಿ.ಮಿ.ವರೆಗೂ ವಿಷಮಯ ವಾತಾವರಣ ಉಂಟಾಗಿದೆ.
ಅತ್ತಿಬೆಲೆ, ವಡ್ಡರಪಾಳ್ಯ ಮಾಯಸಂದ್ರ, ಮುಚ್ಚೆಂದ, ಕಂಬಳೀಪುರ, ಇಂಚಗೂರು, ಮಯಾಸಂದ್ರ, ಬಾಂಡೇಪುರ ವರೆಗೂ ಕೆಮಿಕಲ್ ಘಾಟು ಹಬ್ಬಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.