ರಾಜಕೀಯ ಬೆಳವಣಿಗೆ : ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಭೇಟಿಯಾದ ಸಿದ್ದರಾಮಯ್ಯ | ಜನತಾ ನ್ಯೂಸ್
ನವದೆಹಲಿ : ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ನವದೆಹಲಿಗೆ ಕರೆಸಿದ್ದಾರೆ.
ಇಂದು ಭೇಟಿಯ ಬಳಿಕ, ಎಐಸಿಸಿ ಅಧ್ಯಕ್ಷರಾದ ಸೋನಿಯಾಗಾಂಧಿಯವರ ಜೊತೆಗಿನ ಇಂದಿನ ಭೇಟಿ ಎಂದಿನಂತೆ ಸೌಹಾರ್ದಯುತವಾಗಿತ್ತು. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸಂಘಟನೆಯ ಬಗ್ಗೆ ಚರ್ಚೆ ನಡೆಯಿತು. ರಾಷ್ಟ್ರರಾಜಕಾರಣಕ್ಕೆ ಅವರು ನನಗೆ ಆಹ್ವಾನ ನೀಡಿರಲಿಲ್ಲ. ಇವೆಲ್ಲ ಊಹಾಪೋಹದ ಸುದ್ದಿ. ರಾಷ್ಟ್ರರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ನಮ್ಮ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಈ ಹಿಂದೆ ಆಹ್ವಾನಿಸಿದಾಗಲೇ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ರಾಜಕೀಯದಲ್ಲಿ ಸಕ್ರಿಯನಾಗಿರುವವರೆಗೆ ರಾಜ್ಯಕ್ಕೆ ಸೀಮಿತವಾಗಿರುವೆ, ಎಂದು ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಘಟನೆಯ ಹಾಗೂ ಪ್ರಿಯಂಕಾ ಗಾಂಧಿ ವಾಡ್ರಾ ಅವರ ಬಂಧನದ ಬೆನ್ನಲ್ಲೇ ಈ ಭೇಟಿ ಬಂದಿರುವ ಕಾರಣದಿಂದ, ಬಿಜೆಪಿ ಸರ್ಕಾರಗಳ ವಿರುದ್ಧ ಕರ್ನಾಟಕದಲ್ಲಿ ಚಳುವಳಿಯನ್ನು ತೀವ್ರಗೊಳಿಸುವ ಕಾರ್ಯತಂತ್ರಗಳ ಬಗ್ಗೆಯೂ ಸೋನಿಯಾ ಚರ್ಚಿಸಿದ್ದಾರೆ, ಎಂದು ಹೇಳಲಾಗಿದೆ.
ಪಂಜಾಬ್ ಹಾಗೂ ಚತ್ತೀಸ್ಗಡ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳ ಬೆನ್ನಲ್ಲೇ, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ "ಶೀತಲ ಸಮರ"ವನ್ನು ಸಹ ಪರಿಹರಿಸಲು ನಡೆಸಿರುವ ಪ್ರಯತ್ನ ಇದಾಗಿರುವ ಸಾಧ್ಯತೆಗಳಿವೆ, ಎಂದು ಮೂಲಗಳು ತಿಳಿಸಿವೆ.
ಆಡಳಿತಾರೂಡ ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ರಾಜ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯ ಹೈಕಮಾಂಡ್ ಮಂಗಳವಾರ ರಾಷ್ಟ್ರ ರಾಜಧಾನಿಗೆ ಕರೆಸಿ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚಿಸಿದೆ, ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ತಾಲಿಬಾನ್ ಎಂದು ಕರೆದಿದ್ದರು ಮತ್ತು ಇತ್ತೀಚೆಗೆ ಕೇಂದ್ರ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇನ್ನೊಂದೆಡೆ, ಡಿಕೆ.ಶಿವಕುಮಾರ್ ಅವರು ಇಂಧನ ಬೆಲೆ ಏರಿಕೆ ಮತ್ತು ದೈನಂದಿನ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಎತ್ತಿನಬಂಡಿ ರ್ಯಾಲಿ, ಬೈಸಿಕಲ್ ರ್ಯಾಲಿ ಮತ್ತು ಟೊಂಗಾ ರ್ಯಾಲಿಯನ್ನು ಆಯೋಜಿಸುವ ಮೂಲಕ ಯಶಸ್ವಿಯಾಗಿ ಜನರ ಗಮನ ಸೆಳೆದಿದ್ದಾರೆ.
ಒಂದೊಮ್ಮೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಹುಮತ ಸಾಧಿಸಿದರೆ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಗುರಿಯನ್ನು ಹೊಂದಿದ್ದಾರೆ. ಸಧ್ಯಕ್ಕೆ, ಪ್ರತಿಪಕ್ಷ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದ ನಂತರವೂ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಶಿಬಿರಗಳ ನಡುವೆ ಆಳವಾದ ಬಿರುಕು ಇರುವುದರಿಂದ ಕಾರ್ಯಕರ್ತರು ಇನ್ನೂ ಗೊಂದಲದಲ್ಲಿದ್ದಾರೆ.