ವಿಷ ಆಹಾರ ಸೇವಿಸಿ ನಾಲ್ವರ ಸಾವು ಪ್ರಕರಣ- ಮುದ್ದೆಯಲ್ಲಿ ವಿಷ ಹಾಕಿದ ಪುತ್ರಿ | ಜನತಾ ನ್ಯೂಸ್
ಚಿತ್ರದುರ್ಗ : ಒಂದೇ ಮನೆಯಲ್ಲಿ ವಿಷ ಆಹಾರ ಸೇವಿಸಿ ನಾಲ್ವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮನೆಯ ಮಗಳೇ ಊಟದಲ್ಲಿ ವಿಷ ಬೆರೆಸಿ ಕೊಲೆ ಮಾಡಿರುವ ಸತ್ಯ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಜುಲೈ 12 ರಂದು ಈ ಘಟನೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್ಎಸ್ಎಲ್) ವರದಿ ಮೂಲಕ ಮುದ್ದೆಯಲ್ಲಿ ವಿಷ ಬೆರಸಿರುವ ಸತ್ಯ ಬಯಲಾಗಿದೆ.
ಬಾಲಕಿಯನ್ನು, ಕುಟುಂಬದ ತಂದೆ, ತಾಯಿ ಹಾಗೂ ಇತರೆ ಸದಸ್ಯರುಗಳು ಬಾಲಕಿ ಬಗ್ಗೆ ತಾತ್ಸಾರ ಮನೋಭಾವನೆಯನ್ನು ತಾಳಿದ್ದರು. ಅಲ್ಲದೆ ಶಾಲೆಯನ್ನು ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುತ್ತಿದ್ದರು. ಪೋಷಕರು ಹಾಗೂ ಇತರೆ ಕುಟುಂಬ ಸದಸ್ಯರು ವಿನಾಕಾರಣ ಬೈಯುವುದು, ಕೂಲಿ ಕೆಲಸಕ್ಕೆ ಕಳುಹಿಸುತ್ತಿರುವುದು ಬಾಲಕಿಗೆ ದ್ವೇಷ ಹುಟ್ಟಿಸಿತ್ತು.
ಉಳಿದ ಮಕ್ಕಳಾದ ರಮ್ಯಾ ಹಾಗೂ ರಾಹುಲ್ರನ್ನು ಪೋಷಕರು ಪ್ರೀತಿಯಿಂದ ಕಾಣುತ್ತಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕಿಯನ್ನು ತಿರಸ್ಕಾರ ಮನೋಭಾವದಿಂದ ಕಾಣುತ್ತಿದ್ದರು.
ರಾತ್ರಿ ಮುದ್ದೆ ಹಾಗೂ ಹೆಸರುಕಾಳು ಸಾಂಬರ್ ಸೇವನೆ ಬಳಿಕ ಅಸ್ವಸ್ಥರಾಗಿದ್ದರು. ಬಾಲಕಿ ಮಾತ್ರ ಅನ್ನ ಸಾಂಬಾರು ಊಟ ಮಾಡಿದ್ದಳು. ಬಾಲಕಿ ಬಿಟ್ಟು ಅಸ್ವಸ್ಥರಾದವರನ್ನು ಕೂಡಲೇ ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೇ ತಿಪ್ಪಾನಾಯ್ಕ್ (46), ಪತ್ನಿ ಸುಧಾಬಾಯಿ (43) ಹಾಗೂ ವೃದ್ಧೆ ಗುಂಡಿ ಬಾಯಿ (75) ಮೃತಪಟ್ಟಿದ್ದರು. ರಮ್ಯಾ (16) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ವಿಷಾಹಾರ ಸೇವಿಸಿ ರಾಹುಲ್ (5), ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರಿಂದ ಚೇತರಿಸಿಕೊಂಡಿದ್ದನು.
ಹೊಟ್ಟೆ ನೋವಿನ ಕಾರಣ ಅನ್ನ, ಸಾರು ಮಾತ್ರ ಸೇವಿಸಿರುವುದಾಗಿ ಬಾಲಕಿ ತಿಳಿಸಿದ್ದರಿಂದ ಅನುಮಾನಗೊಂಡ ಪೊಲೀಸರು ಈ ಕುರಿತಂತೆ ವಿಚಾರಣೆ ನಡೆಸಿದಾಗ, ಬಾಲಕಿಯೇ ವಿಷಬೆರೆಸಿ ನಾಲ್ವರನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹೀಗಾಗಿ ಬಾಲಕಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.