ಗಂಡನನ್ನೆ ಕೊಂದ ಪತ್ನಿ, ಯುವಕನ ಜತೆ ಸರಸವಾಡುವಾಗ ಸಿಕ್ಕಿಬಿದ್ದ ಮಹಿಳೆ! | ಜನತಾ ನ್ಯೂಸ್
ಕಲಬುರಗಿ : ಪ್ರಿಯಕರನೊಂದಿಗೆ ಸೇರಿ ಪತ್ನಿ ತನ್ನ ಗಂಡನನ್ನೆ ಕೊಂದಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ನಡೆದಿದೆ.
ಕುಡಿದು ಸತ್ತಿದ್ದಾನೆ ಅಂತಾ ಹೆಂಡತಿ ಕತೆ ಕಟ್ಟಿ ಹೇಳಿದ್ದಾಳೆ, ಇದನ್ನು ನಂಬಿದ ಕುಟುಂಬದವರೂ ಕುಡಿದು ಸತ್ತಿದ್ದಾನೆ ಅಂತಾ ನಂಬಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಆಗಿ ಎರಡು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ.
ರಾಜಪ್ಪರೆಡ್ಡಿ (38) ಎಂಬಾತ ಕಳೆದ ಆಗಸ್ಟ್ 24ರಂದು ಮೃತಪಟ್ಟಿದ್ದ. ರಾಜಪ್ಪರೆಡ್ಡಿ ಕುಡುಕನಾಗಿದ್ದ. ಪ್ರತಿದಿನ ಕಂಠಪೂರ್ತಿ ಕುಡಿದು ತೇಲಾಡುತ್ತಿದ್ದ. ಪತ್ನಿ ಅನಸೂಯಾ ಕೂಡ ಕುಡಿದು ಸತ್ತಿದ್ದಾನೆಂದು ಹೇಳಿದ್ದಳು. ಅದನ್ನು ಗ್ರಾಮಸ್ಥರು ಆತನ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದರು.
ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸವಾಡುವಾಗ ಹೆಂಡತಿ ಸಿಕ್ಕಿಬಿದ್ದಿದ್ದಾಳೆ. ಗ್ರಾಮಸ್ಥರು ಪ್ರಿಯಕರನನ್ನ ಕಂಬಕ್ಕೆ ಕಟ್ಟಿ ಥಳಿಸಿದಾಗ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ.
ರಾಜಪ್ಪ ರೆಡ್ಡಿ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ತೆಲಂಗಾಣದ ಅಂತಾವರಂಗೆ ಪತ್ನಿಯ ಮೆನೆಗೆ ತೆರಳಿದ್ದ. ಕೆಲ ತಿಂಗಳುಗಳ ಕಾಲ ಅಂತಾವರಂ ನಲ್ಲಿಯೇ ರಾಜಪ್ಪ ರೆಡ್ಡಿ ಉಳಿದಿದ್ದ. ಆಗ ಪತ್ನಿ ಅನುಸೂಯಾ ಪಕ್ಕದ ಮನೆಯ ಶ್ರೀಶೈಲ್ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪರೆಡ್ಡಿ ತನ್ನ ಪತ್ನಿ ಅನುಸೂಯಾಳನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದ.
ಕುಡಿತದ ಚಟ ಹೊಂದಿದ್ದ ರಾಜಪ್ಪ ರೆಡ್ಡಿಗೆ ಪತ್ನಿ ಮತ್ತು ಪ್ರಿಯಕರ ಕಂಠ ಪೂರ್ತಿ ಕುಡಿಸಿ ಮಾತ್ರೆ ನೀಡಿದ್ದರು. ಕುಡಿದು ಮಾತ್ರೆ ಸೇವಿಸಿದರೂ ರಾಜಪ್ಪ ರೆಡ್ಡಿ ಸಾಯಲಿಲ್ಲ. ಕೊನೆಗೆ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.