ಸಿದ್ದರಾಮಯ್ಯ ಕಂಡರೆ ಕುರುಬರಿಗೆ ಇಂಗ್ಲಿಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್ | ಜನತಾ ನ್ಯೂಸ್
ಮೈಸೂರು : ಕುರುಬರಿಗೆ ಸಿದ್ದರಾಮಯ್ಯನ ನೋಡಿದರೆ ಇಂಗ್ಲೀಷ್ ಸಿನಿಮಾ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ವೇದಿಕೆಗೆ ಬಂದಾಗೆಲ್ಲಾ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಆದರೆ, ಸಮುದಾಯಕ್ಕಾಗಿ ಏನೂ ಮಾಡಿಲ್ಲ. ಕೆಲವೊಂದು ಸಮುದಾಯ ಭವನ, ಕಲ್ಯಾಣ ಮಂಟಪ ಮಾಡಿದ್ದಾರೆ ಅಷ್ಟೇ. ಸಮುದಾಯದ ಆರ್ಥಿಕವಾಗಿ ಮುಂದುವರಿಯೋದಕ್ಕೆ ನಿಮ್ಮ ಕೊಡುಗೆ ಏನು.? ಎಂದು ಸಿದ್ದರಾಮಯ್ಯ ಅವರನ್ನು ವಿಶ್ವನಾಥ್ ಪ್ರಶ್ನಿಸಿದರು.
ಹಾನಗಲ್ ಉಪ ಚುನಾವಣೆ ಮತ ಕೇಳುವಾಗ ಕುರುಬರು, ಕಂಬಳಿ ಸೇರಿದಂತೆ ಬೇಡವಾದ ವಿಚಾರ ಪ್ರಸ್ತಾಪವಾಗುತ್ತಿದ್ದು, ಬೇಡವಾದ ವಿಚಾರಗಳೇ ಜನರನ್ನು ಕೆಣಕ್ತಿರೋದು ಚುನಾವಣೆಗೆ, ರಾಜಕಾರಣಿಗಳಿಗೆ ಶೋಭೆ ತರುವಂತಹದ್ದಲ್ಲ.
ಕಾಗಿನೆಲೆ ಪೀಠಕ್ಕೆ ಯಾರೇ ಹೋದರೂ ಕಂಬಳಿ ಹೊದಿಸಿ ಗೌರವ ತೋರುತ್ತಾರೆ. ಅದೇ ರೀತಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಹೊದಿಸಿದ್ದಾರೆ. ಇದಕ್ಕೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದಲ್ಲ. ಅದನ್ನೇ ಸಿದ್ದರಾಮಯ್ಯ ಬಹಳ ದೊಡ್ಡ ಅಪರಾಧ ಎನ್ನುವಂತೆ, ಏಕ ವಚನದಲ್ಲಿ ಮಾತಾಡುತ್ತಿರೋದು ಯಾರಿಗೂ ಶೋಭೆ ತರವಂತಹದ್ದಲ್ಲ. ಜನ ಸಾಂಪ್ರದಾಯವಾಗಿ ಕಂಬಳಿ ಹೊದಿಸಿದ್ದನ್ನ ಪ್ರಶ್ನೆ ಮಾಡೋದು ಬಹಳ ಸಣ್ಣತನ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ಹಾನಗಲ್-ಸಿಂಧಗಿ ಕ್ಷೇತ್ರದ ಕುರುಬ ಸಮುದಾಯಕ್ಕೆ ಸಂದೇಶ ರವಾನಿಸಿದ ಅವರು, ಸಮುದಾಯ ಹಾಗೂ ದೇಶದ ಓಳಿತಿಗಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಮತಹಾಕಿ. ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಕುರುಬ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಬಸವರಾಜ ಬೊಮ್ಮಾಯಿ ಕುರುಬ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ಕುರುಬರು ಬಿಜೆಪಿ ಬೆಂಬಲಿಸಿ ಎಂದರು.