ರಾಜ್ಯಾದ್ಯಂತ ಲಕ್ಷಾಂತರ ಜನರು ಒಕ್ಕೊರಳಲ್ಲಿ ಕನ್ನಡ ಹಾಡುವ ಮೂಲಕ ಕನ್ನಡ ಪ್ರೀತಿ ವ್ಯಕ್ತ | ಜನತಾ ನ್ಯೂಸ್
ಬೆಂಗಳೂರು : ೬೬ನೇ ಕನ್ನಡ ರಾಜ್ಯೋತ್ಸವ ವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಕರ್ನಾಟಕ ಸರ್ಕಾರವು ಕನ್ನಡದಲ್ಲಿ ಮೂರು ಹಾಡುಗಳನ್ನು ಹಾಡಲು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಲಕ್ಷಾಂತರ ಕನ್ನಡಿಗರು ಪಾಲ್ಗೊಂಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ಧ್ವಜಾರೋಹಣ ನೆರವೇರಿಸಿ ಕನ್ನಡ ಗೀತೆಗಳನ್ನು ಹಾಡಿದರು.
ವಿಧಾನ ಸೌಧದ ಪ್ರಧಾನ ಮೆಟ್ಟಿಲುಗಳ ಮೇಲೆ ನಡೆದಿರುವ ಲಕ್ಷ ಲಕ್ಷ ಕಂಠಗಳ ಕನ್ನಡ ಗೀತ ಗಾಯನ ಕಾರ್ಯಕ್ರಮದಲ್ಲಿ ವಿಧಾನ ಸೌಧದ ಎಲ್ಲ ಸಿಬ್ಬಂಧಿಗಳ ಜೊತೆ ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ , ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್ ಅವರು ಭಾಗವಹಿಸಿ ಸಾಮೂಹಿಕ ಗೀತ ಗಾಯನ ಮಾಡಿದ್ದಾರೆ.
"ನಾಡಗೀತೆ", "ಬಾರಿಸು ಕನ್ನಡ ಡಿಂಡಿಮವ", "ನಿತ್ಯೋತ್ಸವ" ಹಾಗೂ "ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು" ಹಾಡುಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಈ ಕನ್ನಡಕ್ಕಾಗಿ ನಾವು ಅಭಿಯಾನಕ್ಕೆ ತಮ್ಮ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಪ್ರಧಾನ ಮೆಟ್ಟಿಲಿನ ಮೇಲೆ, ಹೈಕೋರ್ಟ್, ಬಿಬಿಎಂಪಿ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ, ರಾಜ್ಯಾದ್ಯಂತ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳು ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಮೈಸೂರು ಅರಮನೆ ಮತ್ತು ವಿಶ್ವ ಪರಂಪರೆಯ ತಾಣವಾದ ಹಂಪಿ ಮುಂತಾದ ಪಾರಂಪರಿಕ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. .
ರಾಷ್ಟ್ರಕವಿ ಕುವೆಂಪು, ನಿತ್ಯೋತ್ಸವ ಕವಿ ನಿಸಾರ್ ಅಹಮದ್ ರಚನೆಯಾದ ಹಾಡಿನೊಂದಿಗೆ ಡಾ.ರಾಜಕುಮಾರ್ ಅವರ ಸಾಹಿತಿ ಹಂಸಲೇಖ ರಚನೆಯ ಜನಪ್ರಿಯ ಗೀತೆಯನ್ನೂ ಸಹ ರಾಜ್ಯದ ವಿವಿಧೆಡೆ ನೆರೆದಿದ್ದ ಹಲವರು ಬೆಳಗ್ಗೆ 11 ಗಂಟೆಗೆ ಹಾಡಿದ್ದು ವಿಶೇಷವಾಗಿದೆ.
ಎಲ್ಲಾ ಬಸ್ ನಿಲ್ದಾಣಗಳು, ಆಟೋ ಸ್ಟ್ಯಾಂಡ್ಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ಜನರು ಸಹ ಉತ್ಸಾಹದಿಂದ ಭಾಗವಹಿಸಿದರು. ಆಚರಣೆಯ ಮೇಲ್ವಿಚಾರಣೆಗೆ ಸರ್ಕಾರವು ಪ್ರತಿ ಜಿಲ್ಲೆಗೆ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಕರ್ನಾಟಕದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಲ್ಲಾ ಮೆಟ್ರೋ ರೈಲುಗಳಲ್ಲಿ ಒಂದೇ ಸಮಯದಲ್ಲಿ ಸಂಗೀತ ತಂಡಗಳು ಹಾಡುಗಳನ್ನು ಪ್ರದರ್ಶಿಸಿದವು.
ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಅಕ್ಟೋಬರ್ 24 ರಿಂದ ನವೆಂಬರ್ 1 ರವರೆಗೆ ರಾಜ್ಯದಾದ್ಯಂತ ಕನ್ನಡವನ್ನು ಉಳಿಸುವ ಮತ್ತು ಉತ್ತೇಜಿಸುವ ಉದ್ದೇಶದಿಂದ "ಕನ್ನಡಕ್ಕಾಗಿ ನಾವು" ಅಭಿಯಾನವನ್ನು ಆಯೋಜಿಸಿದೆ.
ಕರ್ನಾಟಕ ಸರ್ಕಾರವು ಕನ್ನಡದಲ್ಲಿ ಹಾಡುಗಳನ್ನು ಹಾಡಲು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ 10 ಲಕ್ಷಕ್ಕೂ ಹೆಚ್ಚು ಜನರು ಕೊಡುಗೆ ನೀಡಿದ್ದಾರೆ.