ಸರದಾರ್ ಪಟೇಲ್ ರನ್ನು ಜಿನ್ನಾ ಅವರೊಂದಿಗೆ ಹೋಲಿಸುತ್ತಿದ್ದ ಅಖಿಲೇಶ್ ಕ್ಷಮೆಯಾಚಿಸಬೇಕು - ಸಿಎಂ ಯೋಗಿ | ಜನತಾ ನ್ಯೂಸ್
ಲಕ್ನೋ : ದೇಶವನ್ನು ಒಗ್ಗೂಡಿಸಲು ಶ್ರಮಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಹಿಂದೂಸ್ಥಾನವನ್ನು ಒಡೆದ ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಹೋಲಿಸಿದ ಸಮಾಜವಾದಿ ಪಕ್ಷದ(ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು, ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಹೇಳಿದ್ದಾರೆ.
ನಿನ್ನೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹೇಳಿಕೆಯನ್ನು ಕೇಳುತ್ತಿದ್ದೆ. ದೇಶವನ್ನು ಒಡೆದ ಜಿನ್ನಾ ಅವರನ್ನು, ದೇಶವನ್ನು ಒಗ್ಗೂಡಿಸಿದ ಸರದಾರ್ ವಲ್ಲಭಭಾಯಿ ಪಟೇಲ್ ಅವರೊಂದಿಗೆ ಹೋಲಿಸುತ್ತಿದ್ದರು. ಇದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತದ ಏಕತೆ ಮತ್ತು ಸಮಗ್ರತೆಯ ಅಡಿಪಾಯವನ್ನು ಹಾಕಿದರು ಮತ್ತು ಅದರ ಸೃಷ್ಟಿಕರ್ತರು", ಎಂದು ಆದಿತ್ಯನಾಥ್ ಇಂದು ಇಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಜಿನ್ನಾರನ್ನು ವೈಭವೀಕರಿಸಲು ಪ್ರಯತ್ನಿಸುತ್ತಿರುವ ಅವರ(ಅಖಿಲೇಶ್) "ವಿಭಜಕ ಮನಸ್ಥಿತಿ" ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಎಂದು ಅವರು ಯಾದವ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು.
"ಸರ್ದಾರ್ ಪಟೇಲ್ ಅವರೊಂದಿಗೆ ಜಿನ್ನಾ ಸಮೀಕರಿಸುವ ಮೂಲಕ ಜಿನ್ನಾರನ್ನು ವೈಭವೀಕರಿಸಲು ಪ್ರಯತ್ನಿಸುವ ಅಖಿಲೇಶ್ ಅವರ ವಿಭಜಕ ಮನಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇದು ತಾಲಿಬಾನಿ ಮನಸ್ಥಿತಿಯಾಗಿದೆ. ವಿಭಜನೆಯನ್ನು ನಂಬುತ್ತದೆ. ಎಸ್ಪಿ ರಾಷ್ಟ್ರೀಯ ಅಧ್ಯಕ್ಷರು ಇದಕ್ಕಾಗಿ ಕ್ಷಮೆಯಾಚಿಸಬೇಕು", ಎಂದು ಆದಿತ್ಯನಾಥ್ ಹೇಳಿದ್ದಾರೆ.
"ಇಡೀ ಸಮಾಜ ಮತ್ತು ರಾಜ್ಯ ಇದನ್ನು ಖಂಡಿಸಬೇಕು. ಎಸ್ಪಿ ರಾಷ್ಟ್ರೀಯ ಅಧ್ಯಕ್ಷರು ದೇಶದ ಜನರಲ್ಲಿ ಕ್ಷಮೆಯಾಚಿಸಬೇಕು. ಭಾರತದ ಅಖಂಡತೆಯ ಸೃಷ್ಟಿಕರ್ತನ ಅವಮಾನವನ್ನು ದೇಶವು ಒಪ್ಪಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.