ನಿರ್ಮಾಣ ಹಂತದ ಮನೆಯ ಸ್ಲ್ಯಾಬ್ ಕುಸಿದು ಓರ್ವ ಸ್ಥಳದಲ್ಲೇ ಸಾವು | ಜನತಾ ನ್ಯೂಸ್
ಮಂಗಳೂರು : ನಿರ್ಮಾಣ ಹಂತದಲ್ಲಿದ್ದ ಮನೆಯ ಸ್ಲ್ಯಾಬ್ ಕುಸಿದು ಕಾರ್ಮಿಕ ಮೃತಪಟ್ಟು, ಇನ್ನೋರ್ವನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬುಧವಾರ ನಡೆದಿದೆ.
ಗಾರೆ ಕೆಲಸ ಮಾಡಿಕೊಂಡಿದ್ದ ಸಾಲಿಗ್ರಾಮ ಗೆಂಡೆಕೆರೆ ನಿವಾಸಿ ಮಂಜುನಾಥ್ (38) ಮೃತರು ಎಂದು ಗುರುತಿಸಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಚೇತನ್ ಪೂಜಾರಿ (28) ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ ಸ್ಲ್ಯಾಬ್ ನ ಸಪೋರ್ಟ್ ಗಳನ್ನು ತೆಗೆಯುತ್ತಿದ್ದಾಗ ಈ ಘಟನೆ ನಡೆದಿದ್ದು, ಸ್ಲ್ಯಾಬ್ ಕುಸಿದು ಮಂಜುನಾಥ್ ಅವರ ಮೇಲೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ.
ಕೋಟತಟ್ಟು ಪಡುಕೆರೆಯ ಶಿರಸಿ ಮಾರಿಕಾಂಬಾ ದೇವಸ್ಥಾನದ ಸಮೀಪದಲ್ಲಿ ರಾಜಶೇಖರ್ ಹಂದೆ ಎನ್ನುವರ ನಿರ್ಮಾಣ ಹಂತದ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು, ಕಟ್ಟಡಕ್ಕೆ ಯಾವುದೇ ಫಿಲ್ಲರ್, ಇನ್ನಿತರ ಆಧಾರವಿಲ್ಲದೆ ಸುಮಾರು 30 ಫೀಟ್ ಉದ್ದ, 3 ಫೀಟ್ ಆಗಲದ ಸ್ಲ್ಯಾಬ್ ಹಾಕಲಾಗಿತ್ತು.
ಸ್ಲ್ಯಾಬ್ಗೆ ಅಳವಡಿಸಿದ್ದ ಕಂಬವನ್ನು ತೆರವುಗೊಳಿಸುತ್ತಿದ್ದಂತೆ ಗೋಡೆಯ ಒಂದು ಸಾಲು ಕಲ್ಲಿನ ಸಮೇತ ಸ್ಲ್ಯಾಬ್ ನೆಲಕ್ಕುರುಳಿದ್ದು, ಈ ಸಂದರ್ಭ ಕೆಳಗಡೆ ಗಾರೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ ಅವರ ತಲೆಯ ಮೇಲೆ ಹಾಗೂ ಸೆಂಟ್ರಿಂಗ್ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಚೇತನ್ನ ಕಾಲಿನ ಮೇಲೆ ಸ್ಲ್ಯಾಬ್ ಬಿದ್ದಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.