ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ಮುಂದುವರಿಸಲಿದೆ ಎನ್ಸಿಬಿ ಕೇಂದ್ರ ತಂಡ : ಪ್ರಕರಣದಲ್ಲಿ ಟ್ವಿಸ್ಟ್ | ಜನತಾ ನ್ಯೂಸ್
ಮುಂಬೈ : ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ಸಿಬಿ) ಮುಂಬೈ ವಲಯ ಘಟಕದಿಂದ ಒಟ್ಟು 6 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಎನ್ಸಿಬಿ ಪ್ರಧಾನ ನಿರ್ದೇಶಕರು ರಚಿಸಿರುವ ಎನ್ಸಿಬಿ ಹೆಡ್ ಕ್ವಾರ್ಟರ್ನ ಕಾರ್ಯಾಚರಣೆ ಶಾಖೆಯ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವು ಮುಂಬೈ ನಗರಕ್ಕೆ ಆಗಮಿಸಲಿದೆ. ದೆಹಲಿ ಎನ್ಸಿಬಿ ತಂಡ ನಾಳೆ ಮುಂಬೈಗೆ ಆಗಮಿಸುತ್ತಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಮುಂದಿನ ಮತ್ತು ಹಿಂದಿನ ಸಂಪರ್ಕಗಳನ್ನು ಕಂಡುಹಿಡಿಯಲು ಆಳವಾದ ತನಿಖೆ ನಡೆಸಲು ಕೇಂದ್ರ ತಂಡಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಶಾಖೆಗಳನ್ನು ಹೊಂದಿದೆ, ಎಂದು ಎನ್ಸಿಬಿ ತಿಳಿಸಿದೆ.
ಯಾವುದೇ ಅಧಿಕಾರಿ ಅಥವಾ ಅಧಿಕಾರಿಗಳನ್ನು ಅವರ ಪ್ರಸ್ತುತ ಸ್ಥಾನಗಳಿಂದ ತೆಗೆದುಹಾಕಲಾಗಿಲ್ಲ ಮತ್ತು ಯಾವುದೇ ನಿರ್ದಿಷ್ಟ ಆದೇಶಗಳನ್ನು ವ್ಯತಿರಿಕ್ತವಾಗಿ ಹೊರಡಿಸುವವರೆಗೆ ಅವರು ಅಗತ್ಯವಿರುವಂತೆ ಕಾರ್ಯಾಚರಣೆಗಳ ಶಾಖೆಯ ತನಿಖೆಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತಾರೆ. ಎನ್ಸಿಬಿ ಒಂದೇ ಸಂಯೋಜಿತ ಏಜೆನ್ಸಿಯಾಗಿ ಭಾರತದಾದ್ಯಂತ ಕಾರ್ಯನಿರ್ವಹಿಸುತ್ತದೆ ಎಂದು ಪುನರುಚ್ಚರಿಸಲಾಗಿದೆ, ಎಂದು ಎನ್ಸಿಬಿ ಪ್ರಕಟಿಸಿದೆ.
ಬಾಲಿವುಡ್ ಪ್ರಭಾವಿ ನಟ ಶಾರುಕ್ ಖಾನ್ ಮಗ ಆರ್ಯನ್ ಖಾನ್ ಬಂಧನದ ಬೆನ್ನಲ್ಲೇ ಮಹಾರಾಷ್ಟ್ರದ ಗೃಹ ಸಚಿವರು ಸೇರಿದಂತೆ ಹಲವು ಮುಖಂಡರು, ಆರ್ಯನ್ ಖಾನ್ ನನ್ನು ಬಂಧಿಸಿದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಲು ಮುಂದಾಗಿತ್ತು. ಅಲ್ಲದೆ, ಅವರಿಗೆ ಕೊಲೆ ಬೆದರಿಕೆ ಕರೆಗಳು ಹೆಚ್ಚಲು ಪ್ರಾರಂಭಿಸಿತ್ತು.
ನೈಋತ್ಯ ವಲಯ, ಎನ್ಸಿಬಿ ಡೆಪ್ಯೂಟಿ ಡಿಜಿ ಮುತಾ ಅಶೋಕ್ ಜೈನ್ ಎಏನ್ಐ ನೊಂದಿಗೆ ಮಾತನಾಡಿ, ಆರ್ಯನ್ ಖಾನ್ ಪ್ರಕರಣ ಮತ್ತು 5 ಇತರ ಪ್ರಕರಣಗಳು ಸೇರಿದಂತೆ, ನಮ್ಮ ವಲಯದ ಒಟ್ಟು 6 ಪ್ರಕರಣಗಳನ್ನು ಈಗ ದೆಹಲಿ ತಂಡಗಳು(ಎನ್ಸಿಬಿ) ತನಿಖೆ ನಡೆಸುತ್ತವೆ. ಇದು ಆಡಳಿತಾತ್ಮಕ ನಿರ್ಧಾರ, ಎಂದು ತಿಳಿಸಿದ್ದಾರೆ.
ನನ್ನನ್ನು ತನಿಖೆಯಿಂದ ತೆಗೆದುಹಾಕಿಲ್ಲ. ಈ ಪ್ರಕರಣವನ್ನು ಕೇಂದ್ರೀಯ ಸಂಸ್ಥೆಯಿಂದ ತನಿಖೆ ನಡೆಸಬೇಕು, ಎಂದು ನ್ಯಾಯಾಲಯದಲ್ಲಿ ನನ್ನ ರಿಟ್ ಅರ್ಜಿಯಾಗಿತ್ತು. ಆದ್ದರಿಂದ, ಆರ್ಯನ್ ಪ್ರಕರಣ ಮತ್ತು ಸಮೀರ್ ಖಾನ್ ಪ್ರಕರಣವನ್ನು ದೆಹಲಿ ಎನ್ಸಿಬಿಯ ಎಸ್ಐಟಿ ತನಿಖೆ ನಡೆಸುತ್ತಿದೆ. ಇದು ದೆಹಲಿ ಮತ್ತು ಮುಂಬೈನ ಎನ್ಸಿಬಿ ತಂಡಗಳ ನಡುವಿನ ಸಮನ್ವಯ, ಎಂದು ಎನ್ಸಿಬಿ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ಎಏನ್ಐಗೆ ತಿಳಿಸಿದ್ದಾರೆ.