7 ಜಿಲ್ಲೆಗಳ ಮುಂಬೈ-ಕರ್ನಾಟಕ ಪ್ರದೇಶಕ್ಕೆ ಈಗ ಕಿತ್ತೂರು-ಕರ್ನಾಟಕ : ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದ ಒಟ್ಟು ಏಳು ಜಿಲ್ಲೆಗಳನ್ನು ಒಳಗೊಂಡಿರುವ ಮುಂಬೈ-ಕರ್ನಾಟಕ ಪ್ರದೇಶವನ್ನು "ಕಿತ್ತೂರು ಕರ್ನಾಟಕ" ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತ್ರತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿದೆ.
ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರಿಗಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ಆಳ್ವಿಕೆ ನಡೆಸಿದ ಬೆಳಗಾವಿ ಜಿಲ್ಲೆಯ ಐತಿಹಾಸಿಕ ತಾಲ್ಲೂಕಿನ ಹೆಸರಿನ ಮೂಲದಿಂದ "ಕಿತ್ತೂರು"-ಕರ್ನಾಟಕ ಎಂಬ ಹೆಸರು ಇಡಲಾಗಿದೆ.
ಹಿಂದೆ ಹೈದರಾಬಾದ್ನ ನಿಜಾಮರು ಆಳ್ವಿಕೆಯಲ್ಲಿದ್ದ ಹೈದರಾಬಾದ್-ಕರ್ನಾಟಕ ಪ್ರದೇಶವನ್ನು, 2019ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವು ಮರುನಾಮಕರಣ ಮಾಡಿದ್ದು, "ಕಲ್ಯಾಣ-ಕರ್ನಾಟಕ" ಎಂದು ಹೆಸರಿಸಿದ್ದರು.
ಗಡಿ ವಿವಾದಗಳು ಹೆಚ್ಚಾಗಿ ಉದ್ಭವಿಸುತ್ತಲೇ ಇರುವ ಸಂದರ್ಭದಲ್ಲಿ ಹಳೆಯ ಹೆಸರನ್ನು ಉಳಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ. ಎಂಬ ಕಾರಣದಿಂದ ಮುಂಬೈ-ಕರ್ನಾಟಕ ಪ್ರದೇಶವನ್ನು ಮರುನಾಮಕರಣ ಮಾಡಲಾಗುವುದು, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ ಒಂದು ವಾರದ ನಂತರ ಈ ಘೋಷಣೆ ಬಂದಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು, "ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ ಮತ್ತು ಹಾವೇರಿ" ಜಿಲ್ಲೆಗಳನ್ನೊಳಗೊಂಡ ಮುಂಬೈ-ಕರ್ನಾಟಕ ಪ್ರದೇಶವನ್ನು ಕಿತ್ತೂರು ಕರ್ನಾಟಕ ಎಂದು ಮರುನಾಮಕರಣ ಮಾಡುವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಅಲ್ಲದೇ, "ನಾವು ಈ ಪ್ರದೇಶವನ್ನು ಬಾಂಬೆ-ಕರ್ನಾಟಕ ಅಥವಾ ಮುಂಬೈ-ಕರ್ನಾಟಕ ಎಂದು ಉಲ್ಲೇಖಿಸಲು ಬಯಸದ ಕಾರಣ ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ", ಎಂದು ಜೆ ಸಿ ಮಾಧುಸ್ವಾಮಿ ಹೇಳಿದರು.
ಉತ್ತರ ಕರ್ನಾಟಕದ ಜಿಲ್ಲೆಗಳ ಗುಂಪಿಗೆ ಕಿತ್ತೂರು-ಕರ್ನಾಟಕ ಪ್ರದೇಶ ಎಂದು ನಾಮಕರಣ ಮಾಡಿದ ಕಾರಣವನ್ನು ವಿವರಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕರ್ನಾಟಕ ಏಕೀಕರಣದ ನಂತರ ನಮ್ಮ ಗಡಿ ವಿವಾದಗಳು ಪ್ರಾರಂಭವಾದವು ಮತ್ತು ಅದು ಇತ್ಯರ್ಥವಾಗಿದ್ದರೂ ಜಗಳಗಳು ನಡೆಯುವುದನ್ನು ನಾವು ಕೇಳುತ್ತೇವೆ. ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಅದನ್ನು ಮುಂಬೈ-ಕರ್ನಾಟಕ ಎಂದು ಕರೆಯುವುದರಲ್ಲಿ ಏನಾದರೂ ಅರ್ಥವಿದೆಯೇ? ಇದನ್ನು ಮುಂಬೈ-ಕರ್ನಾಟಕ ಎಂದು ಕರೆಯುವುದರ ಅರ್ಥವೇನು?", ಎಂದು ಪ್ರಶ್ನಿಸಿದ್ದಾರೆ.