ಕಾಂಗ್ರೆಸ್ ನಾಯಕರ ಬಳಿ ಬಿಟ್ ಕಾಯಿನ್ ಹಗರಣದ ದಾಖಲೆ ಇದ್ದರೆ ಬಿಡುಗಡೆ ಮಾಡಲಿ | ಜನತಾ ನ್ಯೂಸ್
ಕೊಪ್ಪಳ : ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರು ಇದ್ದರೆ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಒಂದು ಹೆಸರು ಹೇಳಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ನವರು ಬರೀ ಸುಳ್ಳು ಹೇಳ್ತಾರೆ. ಇವರು ನಿಜಕ್ಕೂ ಪ್ರಾಮಾಣಿಕರಾಗಿದ್ರೆ ಒಂದು ಹೆಸರು ಹೇಳಲಿ. ನೀವು ಹೆಸರು ಹೇಳಿದ್ರೆ, ನಾನು ಶಹಬಾಸ್ ಅಂತಾ ಹೇಳ್ತೀನಿ. ಬಿಟ್ ಕಾಯಿನ್ ವಿಚಾರದಲ್ಲಿ ದಾಖಲೆ ಇದೆ ಎಂದು ಅಧಿಕಾರಿಗಳನ್ನು ಕಾಂಗ್ರೆಸ್ನವರು ಬ್ಲಾಕ್ ಮೇಲ್ ಮಾಡ್ತಿದ್ದಾರೆ.
ಡಿಕೆ ಶಿವಕುಮಾರ್ ಪ್ರಾಮಾಣಿಕರಾಗಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಆ ದಾಖಲೆ ಇಟ್ಟುಕೊಂಡು ಬೆಂಕಿ ಹಚ್ತೀರಾ ಎಂದು ಹೇಳಿದರು. ದಾಖಲೆ ಇಟ್ಕೊಂಡು ಕಾಂಗ್ರೆಸ್ ನವರು ಲಾಭ ಮಾಡಿಕೊಳ್ಳುತ್ತಿದ್ದಾರೆ.
ಬೊಮ್ಮಾಯಿಗೆ ಕಂಟಕ ಇದ್ದರೆ ದಾಖಲೆ ಬಿಡುಗಡೆ ಮಾಡಲಿ. ರಾಜ್ಯ,ದೇಶದ ಹಿತದೃಷ್ಟಿಯಿಂದ ದಾಖಲೆ ಬಿಡುಗಡೆ ಮಾಡಲಿ. ಕಾಂಗ್ರೆಸ್ನವರು ಸತ್ತಿಲ್ಲ, ಬದುಕಿದ್ದೀವಿ ಅಂತಾ ತೋರಿಸೋಕೆ ಮಾತಾಡ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ನವರು ಸ್ಪರ್ಧಾತ್ಮಕವಾಗಿ ಮಾತಾಡ್ತಾರೆ. ನಾನ್ ಮುಂದೆ ನಾನ್ ಮುಂದೆ ಅಂತಾ ಸಿದ್ದರಾಮಯ್ಯ, ಡಿಕೆಶಿ ಮಾತಾಡ್ತಿದ್ದಾರೆ. ಇದೀಗ ಪ್ರಿಯಾಂಕ್ ಖರ್ಗೆ ಬೇಜವ್ದಾರಿಯಾಗಿ ಮಾತಾಡ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರು ಬರೀ ಪುಕ್ಸಟೆ ಆರೋಪಗಳನ್ನು ಮಾಡುತ್ತಿದ್ದಾರೆ, ಸಾವಿರಾರು ಕೋಟಿ ಹಗರಣ ಎನ್ನುತ್ತಿದ್ದಾರೆ, ದಾಖಲೆಯಿದ್ದರೆ ಬಿಡುಗಡೆ ಮಾಡಿ, ಈ ಅಂಜನಾದ್ರಿ ಪವಿತ್ರ ಬೆಟ್ಟದಲ್ಲಿ ಅವರ ಹೆಸರುಗಳನ್ನು ಹೇಳಲು ನಾಲಿಗೆ ಬರುತ್ತಿಲ್ಲ ಎಂದರು.