ಗಡ್ಚಿರೋಲಿ ಎನ್ಕೌಂಟರ್ : 29 ಬಂದೂಕು ವಶ,26 ಮೃತ ನಕ್ಸಲ್ ಪೈಕಿ ಮಿಲಿಂದ್ ತೇಲ್ತುಂಬ್ಡೆ ದೇಹ ಗುರುತು ಹಚ್ಚಿದ ಕಮಾಂಡೋ | ಜನತಾ ನ್ಯೂಸ್
ನವದೆಹಲಿ : ನಕ್ಸಲರ ವಿರುದ್ಧ ನಡೆದ ಗಡ್ಚಿರೋಲಿ ಎನ್ಕೌಂಟರ್ ನಡೆದ ಸ್ಥಳದಿಂದ ಪೊಲೀಸರು ಎಕೆ-47 ಸೇರಿದಂತೆ ಇತರೆ 29 ಮಾರಕ ಬಂದೂಕು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಗಡ್ಚಿರೋಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತರಾದವರಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಉನ್ನತ ನಕ್ಸಲ್ ನಾಯಕ ಮಿಲಿಂದ್ ತೇಲ್ತುಂಬ್ಡೆ ಒಬ್ಬರು ಎಂದು ಪೊಲೀಸರು ಗುರುತಿಸಿದ್ದಾರೆ. ಇತನು ಎಲ್ಗರ್ ಪರಿಷತ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿತರಾದ ಆನಂದ್ ತೇಲ್ತುಂಬ್ಡೆ ಸಹೋದರ ಎನ್ನಲಾಗಿದೆ.
ಮೃತ ನಕ್ಸಲರಲ್ಲಿ ಎಂಎಂಸಿ ವಲಯದ ಮುಖ್ಯಸ್ಥ ಮಿಲಿಂದ್ ತೇಲ್ತುಂಬ್ಡೆ ತಲೆಯ ಮೇಲೆ 50 ಲಕ್ಷ ರೂಪಾಯಿ ಮತ್ತು ಕೊರ್ಚಿ ದಲಂ ಕಮಾಂಡರ್ ಕಿಶನ್/ಜೈಮಾನ್ ತಲೆ ಮೇಲೆ 8 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು.
ಚತ್ತೀಸ್ಗಡ ಗಡಿಯಲ್ಲಿರುವ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಶನಿವಾರ ಪೊಲೀಸರ ಸಿ60 ಕಮಾಂಡೋ ಪಡೆ 10ಗಂಟೆಗಳ ಕಾಲ ನಡೆಸಿದ ಎನ್ಕೌಂಟರ್ನಲ್ಲಿ ಕನಿಷ್ಠ 26 ನಕ್ಸಲರು ಹತರಾಗಿದ್ದರು. ನಿನ್ನೆ ಎನ್ಕೌಂಟರ್ ನಡೆದ ಸ್ಥಳದಿಂದ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಯುದ್ಧೋಚಿತ ರೀತಿಯ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ವಶಪಡಿಸಿಕೊಂಡಿದ್ದಾರೆ. ಸಿ-60 ಕಮಾಂಡೋಗಳು ಸೇರಿದಂತೆ 300 ಪೊಲೀಸ್ ಸಿಬ್ಬಂದಿಯ ತಂಡ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
ವಶಪಡಿಸಿಕೊಂಡ 29 ಶಸ್ತ್ರಾಸ್ತ್ರಗಳಲ್ಲಿ ಆರು ಎಕೆ-47 ರೈಫಲ್ಗಳು, ಒಂದು ಪಿಸ್ತೂಲ್, ಒಂಬತ್ತು 12-ಬೋರ್ ಗನ್ಗಳು, ಒಂಬತ್ತು ಸ್ವಯಂ-ಲೋಡಿಂಗ್ ರೈಫಲ್ಗಳು, ಮೂರು 303 ರೈಫಲ್ಗಳು ಮತ್ತು ಒಂದು ಐಎನ್ಎಸ್ಎಎಸ್ ರೈಫಲ್ ಸೇರಿವೆ.