3 ಕೃಷಿ ಕಾನೂನು ರದ್ದು : ನಾನು ಏನೇನು ಮಾಡಿದ್ದೇನೆ, ರೈತರಿಗಾಗಿ ಮಾಡಿದ್ದೇನೆ - ಪ್ರಧಾನಿ ಮೋದಿ | ಜನತಾ ನ್ಯೂಸ್
ನವದೆಹಲಿ : ಕಳೆದ ವರ್ಷ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ, ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಘೋಷಿಸಿದರು. ಇಂದು ಸಿಖ್ ಧರ್ಮದ ಮೊದಲ ಗುರುವಾದ ಗುರುನಾನಕ್ ಜಯಂತಿ ಯಂದು ಪ್ರಧಾನ ಮೋದಿ ಈ ಕುರಿತು ಘೋಷಿಸಿದ್ದಾರೆ.
"ನಮ್ಮ ತಪಸ್ಸಿನಲ್ಲಿ ಕೆಲವು ಕೊರತೆಯಿರಬಹುದು, ಆದ್ದರಿಂದ, ನಮ್ಮ ಕೆಲವು ರೈತ ಸಹೋದರರನ್ನು ನಾವು ಮನವೊಲಿಸಲು ಸಾಧ್ಯವಾಗಲಿಲ್ಲ", ಎಂದು ಇಂದು ಶುಕ್ರವಾರದ ವಿಶೇಷ ದೂರದರ್ಶನದ ಭಾಷಣದಲ್ಲಿ ಮೋದಿ ಹೇಳಿದರು. ಹಾಗೂ ಈ ಸಂದರ್ಭದಲ್ಲಿ ಅವರು ಆಂದೋಲನವನ್ನು ಕೈಬಿಡುವಂತೆ ಹಾಗೂ ತಮ್ಮ ಹೊಲಕ್ಕೆ ತೆರಳುವಂತೆ ರೈತರನ್ನು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು, "ನಾನು ಏನೇನು ಮಾಡಿದ್ದೇನೆ, ನಾನು ರೈತರಿಗಾಗಿ ಮಾಡಿದ್ದೇನೆ, ನಾನು ಮಾಡುತ್ತಿರುವುದು ದೇಶಕ್ಕಾಗಿ, ನಿಮ್ಮ ಆಶೀರ್ವಾದದಿಂದ, ನನ್ನ ಶ್ರಮದಲ್ಲಿ ನಾನು ಏನನ್ನೂ ಕಮ್ಮಿ ಮಾಡಿಲ್ಲ. ಇಂದು ನಾನು ನಿಮಗೆ ಭರವಸೆ ನೀಡುತ್ತೇನೆ, ನಾನು ಈಗ ಇನ್ನೂ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತೇನೆ. ಏಕೆಂದರೆ, ನಿಮ್ಮ ಕನಸುಗಳು, ರಾಷ್ಟ್ರದ ಕನಸುಗಳು ನನಸಾಗಿಸಲು. ತುಂಬಾ ಧನ್ಯವಾದಗಳು" ಎಂದು ಹೇಳಿದ್ದಾರೆ.
ರಾಷ್ಟ್ರದ ರಾಜಧಾನಿ ಮತ್ತು ಸುತ್ತಮುತ್ತಲಿನ ಗಡಿ ಪ್ರದೇಶಗಳಲ್ಲಿ, ಕಳೆದ 300 ದಿನಗಳ ಕಾಲ ಸತತವಾಗಿ ನಡೆಯುತ್ತಿರುವ ಪ್ರತಿಭಟನೆಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸಿದೆ. ರೈತ ಮುಖಂಡರು ಹಾಗೂ ಪ್ರತಿಪಕ್ಷದ ಮುಖಂಡರು ಈ ನಿರ್ಧಾರವನ್ನು ತಮ್ಮ ವಿಜಯ ಎಂದು ಹರ್ಷೋದ್ಗಾರದಿಂದ ಸ್ವಾಗತಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಗೆ ಮುಂಚಿತವಾಗಿ, ಎರಡು ರಾಜ್ಯಗಳಲ್ಲಿ ವಿವಾದಿತ ಕಾನೂನುಗಳ ವಿರುದ್ಧದ ಕೋಪವು ಹೆಚ್ಚು ತೀವ್ರವಾಗಿರುವ ಹಿನ್ನೆಲೆಯಲ್ಲಿ ಮೋದಿಯವರ ನಿರ್ಧಾರವು ಬಂದಿದೆ.
ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಅಧಿವೇಶನದಲ್ಲಿ ಈ ಕಾನೂನುಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಆರಂಭವಾಗಲಿದೆ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಕಾನೂನುಗಳನ್ನು ದೇಶದ ಸಂಸತ್ತು ಅನುಮೋದಿಸಿರುವುದರಿಂದ, ಅವುಗಳನ್ನು ರದ್ದುಗೊಳಿಸುವುದು ಸಹ ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಹೋಗಬೇಕಾಗುತ್ತದೆ.
ಅಷ್ಟೇ ಅಲ್ಲದೇ, "ನಾವು ಶೂನ್ಯ-ಬಜೆಟ್ ನೈಸರ್ಗಿಕ ಕೃಷಿಯನ್ನು ಜಾರಿಗೆ ತರಲು ನಿರ್ಧರಿಸಿದ್ದೇವೆ ... ಎಂಎಸ್ಪಿ(ಕನಿಷ್ಠ ಬೆಂಬಲ ಬೆಲೆ) ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ಇತರ ಸಮಸ್ಯೆಗಳಿಗೆ... ಒಂದು ಸಮಿತಿಯನ್ನು ರಚಿಸಲಾಗುವುದು, ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರೈತರು, ವಿಜ್ಞಾನಿಗಳು ಎರಡರ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಮತ್ತು ಅರ್ಥಶಾಸ್ತ್ರಜ್ಞರು,” ಎಂದು ಮೋದಿ ಸೇರಿಸಿದ್ದಾರೆ.