ಕಾಂಗ್ರೆಸ್ ಬರ್ಬಾದ್ ಆಗಿದೆ. ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ: ಈಶ್ವರಪ್ಪ ತಿರುಗೇಟು | ಜನತಾ ನ್ಯೂಸ್
ಮಂಡ್ಯ : ರಾಜ್ಯದ ಬಹುತೇಕ ಕಡೆ ಮಳೆ ಸುರಿಯುತ್ತಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ಬಿಜೆಪಿ ಸಚಿವರು ಬಿಜೆಪಿ ಜನಸ್ವರಾಜ್ ಯಾತ್ರೆ ನಡೆಸುತ್ತಾ ಬೇಜಾಬ್ದಾರಿತನ ತೋರುತ್ತಿದ್ದಾರೆ. ಅವರದ್ದು ಜನಸ್ವರಾಜ್ ಯಾತ್ರೆ ಅಲ್ಲ ಜನ ಬರ್ಬಾದ್ ಯಾತ್ರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಕೆ ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಬರ್ಬಾದ್ ಆಗುತ್ತಾ? ಜನ ಬರ್ಬಾದ್ ಆಗುತ್ತಾ? ಕರ್ನಾಟಕದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಕಿತ್ತಾಕಿದ್ದೇವೆ. ಕಾಂಗ್ರೆಸ್ ಬರ್ಬಾದ್ ಆಗಿದೆ, ಎಲ್ಲ ಕಡೆ ಕಾಂಗ್ರೆಸ್ ಸೋಲ್ತಿದೆ. ಕಾಂಗ್ರೆಸ್ ಬರ್ಬಾದ್ ಯಾತ್ರೆ ಅಂತ ಮಂಡ್ಯದ ಜನಸ್ವರಾಜ್ ಸಮಾವೇಶದಲ್ಲಿ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಜನಸ್ವರಾಜ್ ಯಾತ್ರೆ ಮುಗಿದ ನಂತರ ಗೊತ್ತಾಗುತ್ತೆ ಕಾಂಗ್ರೆಸ್ ಬರ್ಬಾದ್ ಆಗುತ್ತಾ? ಅಥವಾ ಜನ ಬರ್ಬಾದ್ ಆಗ್ತಾರಾ ಅಂತ. ನನಗೆ ವಿಶ್ವಾಸ ಇದೆ ವಿಧಾನ ಪರಿಷತ್ನ 25 ಕ್ಷೇತ್ರದಲ್ಲಿ 15 ರಿಂದ 16 ಕ್ಷೇತ್ರ ಗೆದ್ದು ಕಾಂಗ್ರೆಸ್ ಬರ್ಬಾದ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅವರಿಗೆ ಟೀಕೆ ಮಾಡಿ ಮಾಡಿ ಅಭ್ಯಾಸ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಹಾಗೂ ದೇವೇಗೌಡರ ಕಾಲು ಹಿಡಿದು ಕೇಳಿಕೊಂಡೆ ಪ್ರವಾಸಕ್ಕೆ ಬನ್ನಿ ಅಂತ. ಒಂದು ಕಡೆ ಕೂಡ ಅವರು ಬರಲಿಲ್ಲ ಈಗ ಪುಕಸಟ್ಟೆ ಬಾಷಣ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
ಸುಳ್ಳು ಹೇಳಲು ನೊಬೆಲ್ ಪ್ರಶಸ್ತಿ ಇಟ್ರೆ ಸಿದ್ದರಾಮಯ್ಯ ಗೆಲ್ತಾರೆ. ಡಿಕೆಶಿ, ಸಿದ್ದರಾಮಯ್ಯಗೆ ಪಂದ್ಯ ಇಟ್ಟರೆ ಸಿದ್ದರಾಮಯ್ಯ ಗೆಲ್ತಾರೆ. ಕೊವಿಡ್ ಬಂದಾಗ ಮೋದಿ ಸರ್ಕಾರ ಹಳ್ಳಿಗಳಿಗೆ ವ್ಯಾಕ್ಸಿನ್ ಕೊಟ್ರೆ ಡಿಕೆಶಿ, ಸಿದ್ದರಾಮಯ್ಯ ಆ ವ್ಯಾಕ್ಸಿನ್ ಮುಟ್ಟಬೇಡಿ ಅಂದರು. ವ್ಯಾಕ್ಸಿನ್ ಹಾಕಿಸಿಕೊಂಡ್ರೆ ಗಂಡಸ್ತನ ಹೋಗಿಬಿಡುತ್ತೆ ಎಂದ್ರು. ಕೊನೆಗೆ ಜನರೇ ಜಾಗೃತಿಯಾಗಿ ವ್ಯಾಕ್ಸಿನ್ ಹಾಕಿಸಿಕೊಂಡರು. ಸಿದ್ದು, ಡಿಕೆ ಬೆಂಬಲಿಗರು ಕದ್ದು ಬಂದು ಲಸಿಕೆ ಪಡೆದರು. ಕಾಂಗ್ರೆಸ್ ನಾಯಕರು ಸುಳ್ಳು ಹೇಳ್ತಿದ್ದಾರೆ ಅಂತ ಈಶ್ವರಪ್ಪ ಹೇಳಿದ್ದಾರೆ.
ಮೋದಿಯವರನ್ನ ವಿಶ್ವ ನಾಯಕ ಎಂದು ಪ್ರಪಂಚ ಒಪ್ಪಿಕೊಂಡಿದೆ. ಕಾಂಗ್ರೆಸ್ಸಿನವರು ಕೆಟ್ಟ ಪದ ಬಳಸಿ ಏಕವಚನದಲ್ಲಿ ಮೋದಿ ಬಗ್ಗೆ ಮಾತನಾಡುತ್ತಾರೆ. ಬಡವರು, ಸೈನಿಕರು ಮೋದಿ ಅವರನ್ನು ಮೆಚ್ಚಿದ್ದಾರೆ. ಇವರು ಏಕವಚನದಲ್ಲಿ ಮೋದಿಗೆ ಮಾತನಾಡುತ್ತಾರೆ. ಸುಳ್ಳು ಹೇಳಿ ದೇಶವನ್ನ ದಾರಿ ತಪ್ಪಿಸುತ್ತಿದ್ದಾರೆ. ಇವತ್ತು ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ ಎಂದರು.