ಪಾಕಿಸ್ತಾನದಲ್ಲಿ ಧರ್ಮನಿಂದನೆ : ಕಂಪನಿಯೊಂದರ ಜಿ.ಎಂ.(ಅಲ್ಪಸಂಖ್ಯಾತ)ನನ್ನು ಹಾಡುಹಗಲೇ ಹೊಡೆದು, ಸುಟ್ಟುಹಾಕಿದ ಜನರು | ಜನತಾ ನ್ಯೂಸ್
ಲಾಹೋರ್ : ಪಾಕಿಸ್ತಾನದಲ್ಲಿ ಉಗ್ರಗಾಮಿ ಇಸ್ಲಾಮಿಸ್ಟ್ ಪಕ್ಷದ ಬೆಂಬಲಿಗರ ಗುಂಪೊಂದು, ಧರ್ಮನಿಂದನೆ ಆರೋಪದ ಮೇಲೆ ಕಂಪನಿಯೊಂದರ ಪ್ರಧಾನ ವ್ಯವಸ್ತಾಪಕನನ್ನು ಕೊಂದು ಆತನ ದೇಹವನ್ನು ಸುಟ್ಟು ಹಾಕಿದ ಭೀಕರ ಘಟನೆ ವರದಿಯಾಗಿದೆ.
ನಿನ್ನೆ ಶುಕ್ರವಾರದಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆಯ ಆರೋಪದ ಮೇಲೆ ಕಂಪನಿಯೊಂದರ ಮೇಲೆ ದಾಳಿ ನಡೆಸಿದ ಪಾಕ್ ನ ಟಿಎಲ್ಪಿ ಇಸ್ಲಾಮಿಸ್ಟ್ ಪಕ್ಷದ ಉದ್ರಿಕ್ತ ಬೆಂಬಲಿಗರ ಗುಂಪು ಶ್ರೀಲಂಕಾದ ಗಾರ್ಮೆಂಟ್ಸ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ರನ್ನು ಹೊಡೆದು ಸಾಯಿಸಿ ಅವರ ದೇಹವನ್ನು ಸುಟ್ಟುಹಾಕಿದ್ದಾರೆ, ಎನ್ನಲಾಗಿದೆ.
ಲಾಹೋರ್ನಿಂದ ಹತ್ತಿರವಿರುವ ಸಿಯಾಲ್ಕೋಟ್ ಜಿಲ್ಲೆಯ ಗಾರ್ಮೆಂಟ್ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ಆಗಿ ಪ್ರಿಯಾಂತ ಕುಮಾರ(40) ಕೆಲಸ ಮಾಡುತ್ತಿದ್ದರು, ಎಂದು ಪಂಜಾಬ್(ಪಾಕ್) ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಜನಸಮೂಹವು ಜನರಲ್ ಮ್ಯಾನೇಜರ್ ರನ್ನು(ಶ್ರೀಲಂಕಾದ ಪ್ರಜೆ) ಕಾರ್ಖಾನೆಯಿಂದ ಎಳೆದೊಯ್ದು ತೀವ್ರವಾಗಿ ಚಿತ್ರಹಿಂಸೆ ನೀಡಿತು. ಅವನು ತನ್ನ ಗಾಯಗಳಿಗೆ ಬಲಿಯಾದ ನಂತರ, ಜನಸಮೂಹವು ಆತನನ್ನು ಸುಟ್ಟುಹಾಕಿತು," ಎಂದು ಹೇಳಲಾಗಿದೆ.
ಘಟನೆಯ ಹಿನ್ನೆಲೆ
ಇಸ್ಲಾಮಿಸ್ಟ್ ಪಕ್ಷದ ಪೋಸ್ಟರ್ ಅನ್ನು ಮೃತರಾದ ಕುಮಾರ ಅವರ ಕಚೇರಿಯ ಪಕ್ಕದ ಗೋಡೆಯ ಮೇಲೆ ಅಂಟಿಸಲಾಗಿತ್ತು. ಈ ತೀವ್ರಗಾಮಿ ಇಸ್ಲಾಮಿಕ್ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ(ಟಿಎಲ್ಪಿ)ದ ಭಿತ್ತಿಪತ್ರವನ್ನು ಕುಮಾರ ಅವರು ಹರಿದು, ಅದನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಕುಮಾರ ಅವರು ಹರಿದ ಭಿತ್ತಿಪತ್ರದಲ್ಲಿ ಖುರಾನ್ ಪದ್ಯಗಳನ್ನು ಮುದ್ರಿಸಲಾಗಿತ್ತು, ಎಂದು ಆರೋಪಿಸಲಾಗಿದೆ. ಇದನ್ನು ನೋಡಿದ ಒಂದೆರಡು ಕಾರ್ಖಾನೆಯ ಕಾರ್ಮಿಕರು ಕಾರ್ಖಾನೆಯಲ್ಲಿ ಸುದ್ದಿ ಹರಡಿಸಿದ್ದಾರೆ”, ಎಂದು ಅಧಿಕಾರಿ ಹೇಳಿದರು.
"ಧರ್ಮನಿಂದನೆ" ಎಂದು ಕರೆಯಲಾದ, ಘಟನೆಯಿಂದ ಕೋಪಗೊಂಡ ನೂರಾರು ಪುರುಷರ ಗುಂಪು ಅಕ್ಕಪಕ್ಕದ ಪ್ರದೇಶಗಳಿಂದ ಕಾರ್ಖಾನೆಯ ಹೊರಗೆ ಜಮಾಯಿಸಲು ಪ್ರಾರಂಭಿಸಿದರು. ಅವರಲ್ಲಿ ಹೆಚ್ಚಿನವರು ಟಿಎಲ್ಪಿ ಯ ಕಾರ್ಯಕರ್ತರು ಮತ್ತು ಬೆಂಬಲಿಗರಾಗಿದ್ದರು, ಎನ್ನಲಾಗಿದೆ.
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರವು ಇತ್ತೀಚೆಗೆ ಟಿಎಲ್ಪಿ ಯೊಂದಿಗೆ ರಹಸ್ಯ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಅದರ ಮೇಲಿನ ನಿಷೇಧವನ್ನು ತೆಗೆದುಹಾಕಿತು, ನಂತರ ಟಿಎಲ್ಪಿ ಮುಖ್ಯಸ್ಥ ಸಾದ್ ರಿಜ್ವಿ ಸೇರಿದಂತೆ ಮತ್ತು ಭಯೋತ್ಪಾದನೆಯ ಆರೋಪ ಹೊತ್ತಿರುವ 1,500 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.