ವಿವಿಧ ಪಕ್ಷಗಳ ಹಲವಾರು ನಾಯಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಸಿದ್ದರಾಮಯ್ಯ | ಜನತಾ ನ್ಯೂಸ್
ಮಂಡ್ಯ : ಮುಂದೆ ರಾಜ್ಯದಲ್ಲಿ ರಾಜಕೀಯ ಧ್ರುವೀಕರಣ ಆಗಲಿದೆ. ವಿವಿಧ ಪಕ್ಷಗಳ ಹಲವಾರು ನಾಯಕರು ಕಾಂಗ್ರೆಸ್ ಪಕ್ಷದತ್ತ ಬರುತ್ತಿದ್ದಾರೆ. ಈಗಾಗಲೇ ಹಲವರು ಬರುತ್ತಿದ್ದಾರೆ. ಇನ್ನು ಹಲವರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದಿದ್ದಾರೆ.
2023ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 100% ಗೆಲ್ತಾರೆ. ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ಬಹುತೇಕರು ಕಾಂಗ್ರೆಸ್ ಗೆ ಸೇರುತ್ತಾರೆ. ಯಾರು ಸೇರುತ್ತಾರೆ ಎಂದು ನಾನು ಈಗಲೇ ಹೇಳಲ್ಲ. ಮುಂದಿನ ದಿನಗಳಲ್ಲಿ ಎಲ್ಲ ಗೊತ್ತಾಗುತ್ತದೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ಕೊಡುಗೆ ಶೂನ್ಯ, ಪಂಚಾಯತ್ ರಾಜ್ ವ್ಯವಸ್ಥೆ ಬಲವರ್ಧನೆಗೆ ಬಿಜೆಪಿ, ಜೆಡಿಎಸ್ ಕೊಡುಗೆ ಶೂನ್ಯ. ಸ್ಥಳೀಯ ಸಂಸ್ಥೆಗಳಿಗೆ ಬಲ ಕೊಟ್ಟಿದ್ದು ಕಾಂಗ್ರೆಸ್. ಎಲ್ಲಾ ವರ್ಗಗಳಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್. ಅಧಿಕಾರ ವಿಕೇಂದ್ರೀಕರಣದಲ್ಲಿ ನಂಬಿಕೆ, ಬದ್ಧತೆ ಇರೋದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಇದಕ್ಕೆ ಜೆಡಿಎಸ್, ಬಿಜೆಪಿ ಪಕ್ಷಗಳ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.
ನರೇಗ ಯೋಜನೆ ಜಾರಿಗೆ ತಂದಿದ್ದು ಕಾಂಗ್ರೆಸ್. ನರೇಗ ಯೋಜನೆಯಿಂದ ಪಂಚಾಯಿತಿಗಳಿಗೆ ಕೋಟಿ ಕೋಟಿ ಅನುದಾನ ನೀಡಲಾಗಿದೆ. ಹಲವು ತಿಂಗಳಿಂದ ನರೇಗ ಯೋಜನೆಯಡಿ ಕೂಲಿ ಹಣ ಕೊಟ್ಟಿಲ್ಲ. ನಮ್ಮ ಕಾಲದಲ್ಲಿ ಮಂಜೂರಾದ ಮನೆಗಳಿಗೆ ಇನ್ನೂ ಅನುದಾನ ಕೊಟ್ಟಿಲ್ಲ. ಎಲ್ಲವನ್ನೂ ಲಾಕ್ ಮಾಡಿದ್ದಾರೆ. ಈ ಬಗ್ಗೆ ಯಾರು ಬೇಕಾದರೂ ಪರಿಶೀಲನೆ ಮಾಡಬಹುದು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಪಕ್ಷದಿಂದ ಮೈತ್ರಿ ನಿರಾಕರಣೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗ್ತಾರೆ. ಸ್ಥಳೀಯ ನಾಯಕರಿಗೆ ಇನ್ ಡೈರೆಕ್ಟ್ ಆಗಿ ಹೇಳಿ ಕೊಟ್ಟಿದ್ದಾರೆ ಎಂದು ಜೆಡಿಎಸ್ ನಡೆ ಬಗ್ಗೆ ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಇವತ್ತು ಎಲ್ಲಾ ಕಡೆ ಬಿಜೆಪಿ ವಿರುದ್ಧವಾದ ಗಾಳಿ ಬೀಸಲು ಶುರುವಾಗಿದ್ದು, ರಾಜಕೀಯ ಧ್ರುವೀಕರಣ ಆರಂಭವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನಾಕ್ರೋಶ ಶುರುವಾಗಿದೆ. ಅಭಿವೃದ್ಧಿ, ಶೂನ್ಯ, ಭ್ರಷ್ಟಾಚಾರ, ಭರವಸೆ ಈಡೇರಿಸದ ಬಿಜೆಪಿ. ಹೀಗಾಗಿ ಜನ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ ಎಂದಿದ್ದಾರೆ.