ಕೋವಿಡ್ 3ನೇ ಅಲೆ ತಡೆಗೆ ಕಠಿಣ ಕ್ರಮ: ಆರ್ ಅಶೋಕ್ | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ, 3ನೇ ಅಲೆ ಬಾರದಂತೆ ಕಠಿಣ ಕ್ರಮ ಕೈಗೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಓಮಿಕ್ರಾನ್ ಇಡೀ ದೇಶದಲ್ಲಿ ಜಾಸ್ತಿ ಆಗಿದೆ. ಕಳೆದ ಬಾರಿ ತೊಂದರೆ ಆದಂತೆ ಈ ಬಾರಿ ಆಗದಿರಲು ಎಚ್ಚರಿಕೆ ವಹಿಸಲಾಗಿದೆ. 2ನೇ ಅಲೆಯಿಂದ ನಾವು ಪಾಠ ಕಲಿತಿದ್ದೇವೆ. ಆ ವೇಳೆಯಲ್ಲಿ ಸಾಕಷ್ಟು ಸಾವು- ನೋವು ಸಂಭವಿಸಿವೆ. 3ನೇ ಅಲೆ ಮತ್ತೆ ಬರಬಾರದು. ಜನರನ್ನು ರಕ್ಷಣೆ ಮಾಡುವ ಕೆಲಸ ಸರ್ಕಾರ ಮಾಡಲಿದೆ. ಸೂಕ್ತ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಟಫ್ ರೂಲ್ಸ್ ಜಾರಿಗೆ ಕಾಂಗ್ರೆಸ್ ವಿರೋಧಿಸಿರುವ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಕೇಳಿ ಸರ್ಕಾರ ನಡೆಸಲು ಆಗುವುದಿಲ್ಲ. ನಾವು ಜನರ ಕಷ್ಟಕ್ಕೆ ಮಿಡಿಯಬೇಕಾಗಿದೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು ಎಂದರು.
ಈಗಾಗಲೇ ಆಸ್ಪತ್ರೆ ಗಳಲ್ಲಿ ಆಕ್ಸಿಜನ್ ಪ್ಲಾಂಟ್ ಹಾಗು ಆಕ್ಸಿಜನ್ ಬೆಡ್ಗಳನ್ನು ಸುಸ್ಥಿತಿಯಲ್ಲಿಡಲು ಸೂಚಿಸಿದ್ದೇವೆ. ತಜ್ಞರ ಸಲಹೆಯಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.