ದೆಹಲಿ ಗಡಿಗಳಲ್ಲಿ ಪಂಜಾಬ್, ಹರಿಯಾಣ ರೈತರ ಪ್ರತಿಭಟನೆ ಸ್ಥಗಿತ : ಮೊದಲಿನ ಸ್ಥಿತಿಗೆ ತೆರಳಲಿದೆ ರಸ್ತೆಗಳು | ಜನತಾ ನ್ಯೂಸ್
ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪಂಜಾಬ್ ಹಾಗೂ ಹರಿಯಾಣ ರಾಜ್ಯದ ರೈತರು ಕೊನೆಗೂ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. ನಾಳೆ ಸಂಜೆಯೊಳಗೆ ದೆಹಲಿ ಗಡಿಗಳು ಸಂಪೂರ್ಣವಾಗಿ ತೆರವಾಗುವ ಸಾಧ್ಯತೆ ಇದೆ. ಒಂದು ವರ್ಷಕ್ಕೂ ಹೆಚ್ಚು ಕಾಲಗಳಿಂದ ಪ್ರತಿಭಟನೆ ನಡೆಸಿದ್ದ ಪ್ರತಿಭಟನಾಕಾರರು ಜಾಗ ತೆರವು ಮಾಡುತ್ತಿರುವುದರಿಂದ, ನಿರ್ಬಂಧಿಸಿದ್ದ ಸ್ಥಳೀಯ ಸಾರ್ವಜನಿಕ ರಸ್ತೆಗಳ ತೆರವು ಸ್ಥಳೀಯ ಜನಸಾಮಾನ್ಯರ ಸಂಕಷ್ಟಕ್ಕೆ ಕೊನೆಗೂ ಅಂತ್ಯ ಹಾಡಲಿದೆ.
ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಮತ್ತು ಬಾಕಿ ಉಳಿದಿರುವ ಬೇಡಿಕೆಗಳ ಕುರಿತು ಸರ್ಕಾರದ ಪ್ರಸ್ತಾಪದ ನಂತರ, ಇದೀಗ ಯುನೈಟೆಡ್ ಕಿಸಾನ್ ಮೋರ್ಚಾ ರೈತರ ಚಳವಳಿಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಕಿಸಾನ್ ಮೋರ್ಚಾ ಆಂದೋಲನವನ್ನು ಕೊನೆಗೊಳಿಸುವುದಿಲ್ಲ, ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಒಂದು ವರ್ಷದಿಂದ ನಡೆಯುತ್ತಿದ್ದ ರೈತ ಚಳವಳಿಯನ್ನು ಮುಂದೂಡಲಾಗಿದೆ. ಆಂದೋಲನ ಇನ್ನೂ ಅಂತ್ಯಗೊಂಡಿಲ್ಲ ಎಂದು ಯುನೈಟೆಡ್ ಕಿಸಾನ್ ಮೋರ್ಚಾ ಹೇಳಿದೆ. ಪ್ರತಿ ತಿಂಗಳು ಪರಿಶೀಲನಾ ಸಭೆ ನಡೆಸಿ ನಂತರ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಾಗುವುದು, ಎಂದು ರೈತ ಮುಖಂಡ ಬಲವೀರ್ ರಾಜೇವಾಲ್ ತಿಳಿಸಿದರು.
ರೈತ ಮುಖಂಡ ಬಲವೀರ್ ರಾಜೇವಲ್ ಮಾತನಾಡಿ, ದೊಡ್ಡ ಗೆಲುವಿನೊಂದಿಗೆ ಸಾಗುತ್ತಿದ್ದೇವೆ. ದುರಹಂಕಾರಿ ಸರಕಾರದ ತಲೆಬಗ್ಗಿಸಿ ಹೋಗುತ್ತಿದ್ದೇವೆ. ಈ ಚಳವಳಿ ಇನ್ನೂ ಮುಗಿದಿಲ್ಲ, ಈಗ ಸ್ಥಗಿತಗೊಳಿಸಲಾಗಿದೆ ಎಂದರು. ಜನವರಿ 15ರಂದು ಯುನೈಟೆಡ್ ಕಿಸಾನ್ ಮೋರ್ಚಾದ ಮತ್ತೊಂದು ಸಭೆ ನಡೆಯಲಿದ್ದು, ಅದರಲ್ಲಿ ಪರಿಶೀಲನೆ ನಡೆಯಲಿದೆ. ಸರ್ಕಾರ ಎಡ ಅಥವಾ ಬಲಕ್ಕೆ ತಿರುಗಿದರೆ ಮತ್ತೆ ಚಳವಳಿ ಆರಂಭಿಸುವ ನಿರ್ಧಾರ ಕೈಗೊಳ್ಳಬಹುದು.