ಬಿಪಿನ್ ರಾವತ್ ವಿಧಿವಶ: ಸಾವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ | ಜನತಾ ನ್ಯೂಸ್
ಹಾವೇರಿ : ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂಜು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಇಂದು ನಡೆದ ಚುನಾವಣೆಯಲ್ಲಿ ಅವರು ಶಿಗ್ಗಾಂವ್ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಮಾತನಾಡಿ, ದೇಶಕ್ಕಾಗಿ ದೊಡ್ಡ ಸೇನೆಯನ್ನು ಮುನ್ನಡೆಸಿ ರಕ್ಷಣೆ ಮಾಡುತ್ತಿದ್ದವರ ಬಗ್ಗೆ, ಆ ಹುದ್ದೆಯ ಘನತೆಯ ಕುರಿತು ಪರಿಕಲ್ಪನೆ ಇಲ್ಲದೆ ಅತ್ಯಂತ ಬೇಜವಾಬ್ದಾರಿಯಿಂದ ಟ್ವೀಟ್ ಮಾಡಿರುವವರ ಕೃತ್ಯಕ್ಕೆ ಸಂಬಂಧಿಸಿದಂತೆ ಫೇಸ್ ಬುಕ್, ಟ್ವೀಟ್ ಮಾಡಿರುವವರ ವಿಳಾಸವನ್ನು ಪತ್ತೆ ಮಾಡಿ ಕೂಡಲೇ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಕೃತಿಯನ್ನು ಕ್ಷಮಿಸುವ ಮಾತಿಲ್ಲ. ಖಂಡಿತವಾಗಿ ಶಿಕ್ಷೆ ಆಗಲೇಬೇಕು ಎಂದರು.
ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಬೆಂಗಳೂರಿನ ಕಮ್ಯಾಂಡ್ ಆಸ್ಪತ್ರೆಯಲ್ಲಿ ಭೇಟಿಯಾಗಿದ್ದು, ಅತ್ಯುತ್ತಮ ಚಿಕಿತ್ಸೆಯನ್ನು ಪರಿಣಿತ ವೈದ್ಯರ ತಂಡ ನೀಡುತ್ತಿದ್ದಾರೆ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸಿರುವುದಾಗಿ ಹೇಳಿದರು.
ಹೆಲಿಕಾಪ್ಟರ್ ದುರಂತದಲ್ಲಿ ಮರಣವನ್ನಪ್ಪಿರುವ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ಅಂತ್ಯಕ್ರಿಯೆ ಇಂದು ನೆರವೇರಲಿದ್ದು, ಕನ್ನಡನಾಡಿನ ಪರವಾಗಿ ಗೌರವ ಮತ್ತು ಶ್ರದ್ಧಾಂಜಲಿಯನ್ನು ಅರ್ಪಿಸುವುದಾಗಿ ತಿಳಿಸಿದರು.