ನಗರದ ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ: ಮುಖ್ಯ ಆಯುಕ್ತರು | ಜನತಾ ನ್ಯೂಸ್
ಬೆಂಗಳೂರು : ಕಾಂಕ್ರಿಟ್ ರಸ್ತೆ ಹೊರತುಪಡಿಸಿ ಬಹುತೇಕ ಹಾಳುಬಿದ್ದಿರುವ ಸಿಲಿಕಾನ್ ಸಿಟಿ ರಸ್ತೆಗಳಿಗೆ ದುರಸ್ತಿ ಭಾಗ್ಯ ದೊರಕುವ ಹಾಗೆ ಕಂಡುಬಂದಿದೆ.
ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ದುರಸ್ತಿ ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕೆಲಸವನ್ನು ಕೂಡಲೆ ಕೈಗೆತ್ತಿಕೊಳ್ಳಲು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು, ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.
ನಗರದಲ್ಲಿ ರಸ್ತೆಗುಂಡಿಗಳನ್ನು ಮುಚ್ಚುವ ಹಾಗೂ ಡಾಂಬರೀಕರ ಮಾಡುವ ಸಂಬಂಧ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ರಸ್ತೆಗಳಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವಾಗಬೇಕು. ಯಾವುದಾದರು ರಸ್ತೆಯಲ್ಲಿ ರಸ್ತೆ ಗುಂಡಿ ಮುಚ್ಚದೇ ಇರುವುದು ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳೇ ಜವಾಬ್ದಾರರು, ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ ದುರಸ್ತಿಯಾಗಿರುವ ರಸ್ತೆಗಳ ಪೈಕಿ, ಯಾವ್ಯಾವ ರಸ್ತೆಗಳನ್ನು ಕೂಡಲೆ ದುರಸ್ತಿಪಡಿಸಬಹುದು ಎಂಬುದನ್ನು ಪಟ್ಟಿ ಮಾಡಿ ಕೂಡಲೆ ಡಾಂಬರೀಕರಣ ಕೆಲಸವನ್ನು ಪ್ರಾರಂಭಿಸಬೇಕು. ತೀರಾ ದುರಸ್ತಿಯಲ್ಲಿರುವ ರಸ್ತೆಗಳಲ್ಲಿ ಯಾವುದೇ ಹಾನಿಯುಂಟಾಗದ ಹಾಗೆ ವಾಹನಗಳು ಸಂಚರಿಸುವ ರೀತಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು ನಂತರ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಗುಂಡಿಗಳನ್ನು ಮುಚ್ಚುವ ಹಾಗೂ ಡಾಂಬರೀಕರಣ ಮಾಡುವ ಸಂಬಂಧ ಎಲ್ಲಾ ವಲಯಗಳಲ್ಲಿಯೂ ತ್ವರಿತವಾಗಿ ಕೆಲಸ ಪ್ರಾರಂಭಿಸಬೇಕು. ಈ ಸಂಬಂಧ ಪ್ರತಿ ನಿತ್ಯ ಯಾವ್ಯಾವ ರಸ್ತೆಗಳಲ್ಲಿ ಕೆಲಸ ಪ್ರಾರಂಭಿಸಲಾಗಿದೆ, ಎಷ್ಟು ಕೆಲಸ ಮುಗಿದಿದೆ, ನಾಳೆ ಯಾವ್ಯವ ರಸ್ತೆಗಳ ದುರಸ್ತಿ ಮಾಡಲಾಗುತ್ತದೆ ಎಂಬುದರ ಮಾಹಿತಿಯನ್ನು ನೀಡಬೇಕು. ಜೊತೆಗೆ 110 ಹಳ್ಳಿಗಳಿಗೆ ಸಂಬಂಧಿಸಿದ ರಸ್ತೆಗಳ ದುರಸ್ತಿ ಕಾರ್ಯವನ್ನು ಕೂಡಲೆ ಪ್ರಾರಂಭಿಸಿ ವಾಹನಗಳು ಸಂಚರಿಸುವ ರಸ್ತೆ ಪುನಶ್ಚೇತನ ಕಾರ್ಯ ಮಾಡಲು ಸೂಚಿಸಿದರು.
ಬೀದಿ ದೀಪಗಳ ನಿರ್ವಹಣೆಗೆ ಸೂಚನೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಆಗಬೇಕು. ಎಲ್ಲೆಲ್ಲಿ ಬೀದಿ ದೀಪಗಳಲ್ಲಿ ಎಂಬುದನ್ನು ವಿಧಾನಸಭಾ ಕ್ಷೇತ್ರವಾರು ಸಮೀಕ್ಷೆ ಮಾಡಿ ಅದನ್ನು ಪಟ್ಟಿ ಮಾಡಿ ಎಲ್.ಇ.ಡಿ ದೀಪಗಳನ್ನು ಅಳವಡಿಸಬೇಕು. ಹೆಚ್ಚುವರಿಯಾಗಿ ಬೀದಿ ದೀಪಗಳ ಅವಶ್ಯಕತೆಯಿದ್ದರೆ ಕೂಡಲೆ ಅಗತ್ಯ ಕ್ರಮ ಕೈಗೊಂಡು ಎಲ್ಲಾ ಕಡೆ ಬೀದಿ ದೀಪಗಳನ್ನು ಅಳವಡಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಪ್ರಭಾಕರ್, ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್, ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಎಲ್ಲಾ ವಲಯ ಮುಖ್ಯ ಇಂಜಿನಿಯರ್ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾತರಿಗಳು ಉಪಸ್ಥಿತರಿದ್ದರು.