ಕರ್ನಾಟಕದಲ್ಲಿ 3ನೇ ಓಮಿಕ್ರಾನ್ ಪ್ರಕರಣ ಪತ್ತೆ: ಸಚಿವ ಡಾ.ಸುಧಾಕರ್ ಮಾಹಿತಿ | ಜನತಾ ನ್ಯೂಸ್
ಬೆಂಗಳೂರು : ಕರ್ನಾಟಕದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ನ 3ನೇ ಪ್ರಕರಣ ದಾಖಲಾಗಿದೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಮೂರನೇ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 34 ವರ್ಷದ ಪುರುಷನ ಪರೀಕ್ಷಾ ವರದಿ ಪಾಸಿಟಿವ್ ಆಗಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಭಾನುವಾರ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 34 ವರ್ಷದ ಪುರುಷನ ಪರೀಕ್ಷೆ ನಡೆಸಿದ್ದು, ಅವರನ್ನು ಪ್ರತ್ಯೇಕಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 5 ಪ್ರಾಥಮಿಕ ಮತ್ತು 15 ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮೂಲದ 34 ವರ್ಷದ ವ್ಯಕ್ತಿ ದಕ್ಷಿಣ ಆಫ್ರಿಕಾದಿಂದ ಡಿಸೆಂಬರ್ 1ರಂದು ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಏರ್ಪೋರ್ಟ್ನಲ್ಲಿ ಕೋವಿಡ್ ಪರೀಕ್ಷೆ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು.
ಬಳಿಕ ಬಿಬಿಎಂಪಿ ಸೂಚನೆಯಂತೆ ವ್ಯಕ್ತಿ ಹೋಮ್ ಐಸೋಲೇಷನ್ನಲ್ಲಿದ್ದರು. ಡಿಸೆಂಬರ್ 2ರಂದು ಓಮಿಕ್ರಾನ್ ಲಕ್ಷಣಗಳು ಕಾಣಿಸಿದವು. ಡಿಸೆಂಬರ್ 2ರಂದು ಮತ್ತೆ ಕೋವಿಡ್ ಪರೀಕ್ಷೆ ಮಾಡಿದಾಗ ವರದಿ ಪಾಸಿಟಿವ್ ಬಂದಿತ್ತು. ತಕ್ಷಣ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್ನಲ್ಲಿ ಇರಲು ವ್ಯವಸ್ಥೆ ಮಾಡಲಾಯಿತು.
ಡಿಸೆಂಬರ್ 3ರಂದು ಸ್ವ್ಯಾಬ್ ಸಂಗ್ರಹ ಮಾಡಿ ಜಿನೋಮಿಕ್ ಸಿಕ್ವೆನ್ಸಿಂಗ್ಗೆ ಕಳುಹಿಸಲಾಯಿತು. ಭಾನುವಾರ ವರದಿ ಬಂದಿದ್ದು, ಓಮಿಕ್ರಾನ್ ಖಚಿತವಾಗಿದೆ.