8ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಹುತಾತ್ಮ | ಜನತಾ ನ್ಯೂಸ್
ಬೆಂಗಳೂರು : ಒಂದು ವಾರದ ಬಳಿಕ ಭಾರತೀಯ ಸೇನೆಯಿಂದ ಮತ್ತೊಂದು ದುಃಖಕರ ಸುದ್ಧಿ ಬಂದಿದೆ. ಭಾರತೀಯ ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ವರುಣ್ ಸಿಂಗ್ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದೆ.
ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದ ಏಕೈಕ ಯೋಧರಾದ, ಭಾರತೀಯ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಇಂದು ಹುತಾತ್ಮರಾದರು. ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು 8 ದಿನಗಳ ಕಾಲ ಸತತವಾಗಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದರೂ, ತೀವ್ರವಾದ ಗಾಯಗಳಿಂದ ಅವರು ಕೊನೆಯುಸಿರೆಳೆದರು.
ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರಿನಲ್ಲಿ ಎಂಐ-17ವಿ5 ಹೆಲಿಕ್ಯಾಪ್ಟರ್ ಪತನಗೊಂಡಾಗ ಆ ಅಪಘಾತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದರು. ದೇಶವನ್ನೇ ಶೋಕದಲ್ಲಿ ಮುಳುಗಿಸಿದ ಈ ಭೀಕರ ಅಪಘಾತದಲ್ಲಿ ವರುಣ್ ಸಿಂಗ್ ಮಾತ್ರ ಬದುಕುಳಿಯಲು ಸಾಧ್ಯವಾಗಿತ್ತಾದರೂ, ಅಪಘಾತದಲ್ಲಿ ವರುಣ್ ಸಿಂಗ್ ಸುಮಾರು 45 ಪ್ರತಿಶತದಷ್ಟು ಸುಟ್ಟಿದ್ದರು.
ಅವರ ಪ್ರಾಥಮಿಕ ಚಿಕಿತ್ಸೆಯನ್ನು ವೆಲ್ಲಿಂಗ್ಟನ್ನ ಮಿಲಿಟರಿ ಆಸ್ಪತ್ರೆಯಲ್ಲಿ ಮಾಡಲಾಯಿತು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ, ಡಿಸೆಂಬರ್ 9ರಂದು, ಅವರನ್ನು ವೆಲ್ಲಿಂಗ್ಟನ್ನಿಂದ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಇದಾದ ನಂತರವೂ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತಾದರೂ, ಪರಿಸ್ಥಿತಿ ಗಂಭೀರವಾಗಿತ್ತು.