ಹರೀಶ್ ರಾವತ್ ಬೆನ್ನಲ್ಲೇ, ಕಾಂಗ್ರೆಸ್ ನಾಯಕತ್ವದ ವಿರುದ್ಧ ಹೇಳಿಕೆ ನೀಡಿದ ಮನೀಶ್ ತಿವಾರಿ | ಜನತಾ ನ್ಯೂಸ್
ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ರಾಜ್ಯಗಳ ರಾಜಕೀಯದಿಂದ ಈಗಾಗಲೇ ತೊಂದರೆಯಲ್ಲಿರುವ ಕಾಂಗ್ರೆಸ್ ಪಾರ್ಟಿಯಲ್ಲಿ ಹೊಸ ತೊಂದರೆ ಉಂಟುಮಾಡುವ ಹೇಳಿಕೆ ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ಹಿರಿಯ ನಾಯಕ ಮನೀಶ್ ತಿವಾರಿ ಅವರು ಗುರುವಾರ ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿ ರಹಸ್ಯ ಟ್ವೀಟ್ ಮಾಡಿದ್ದಾರೆ.
ಹರೀಶ್ ರಾವತ್ ಅವರ ಹೇಳಿಕೆಯ ಕುರಿತಾದ ಒಂದು ಸುದ್ಧಿಯನ್ನು ಶೇರ್ ಮಾಡುತ್ತಾ, ಕಾಂಗ್ರೆಸ್ ನ ಹಿರಿಯ ಹಾಗೂ ಜಿ23 ನಾಯಕ, "ಮೊದಲು ಅಸ್ಸಾಂ, ನಂತರ ಪಂಜಾಬ್, ಈಗ ಉತ್ತರಾಖಂಡ" ಎಂದು ಸಂಕ್ಷಿಪ್ತವಾಗಿ ಬರೆದಿದ್ದಾರೆ.
ವಿಚಿತ್ರವಲ್ಲವೇ, ಚುನಾವಣೆ ರೂಪದ ಕಡಲು ಇಜಬೇಕು, ಬಹುತೇಕ ಕಡೆ ಸಹಕಾರಕ್ಕಾಗಿ ಸಂಘಟನಾತ್ಮಕ ರಚನೆಗಾಗಿ ಸಹಕಾರದ ಹಸ್ತವನ್ನು ಚಾಚುವ ಬದಲು ಬೆನ್ನು ತಿರುಗಿಸುತ್ತಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ. ಈಜುವ ಸಮುದ್ರದಲ್ಲಿ ಶಕ್ತಿಯು ಅನೇಕ ಮೊಸಳೆಗಳನ್ನು ಬಿಟ್ಟಿದೆ. ಯಾರ ಆದೇಶದ ಮೇರೆಗೆ ನಾನು ಈಜಬೇಕೋ ಅವರ ಪ್ರತಿನಿಧಿಗಳು ನನ್ನ ಕೈ-ಕಾಲುಗಳನ್ನು ಕಟ್ಟುತ್ತಿದ್ದಾರೆ. ಹಲವು ಬಾರಿ ಮನದಲ್ಲಿ ಯೋಚನೆ ಬರುತ್ತಿದೆ, ಹರೀಶ್ ರಾವತ್ ಜಾಸ್ತಿ ಆಯಿತು, ಸಾಕಷ್ಟು ಈಜಿದೆ, ಈಗ ವಿಶ್ರಾಂತಿಯ ಸಮಯ ಬಂದಿದೆ.
ಆಗ ಗುಟ್ಟಾಗಿ ನನ್ನ ಮನದ ಒಂದು ಮೂಲೆಯಿಂದ ಧ್ವನಿ ಏಳುತ್ತಿದೆ "ನ ದೈನ್ಯಂ ನ ಪಲಾಯನಂ". ನಾನು ಮಹಾ ಅವಮಾನದ ಸ್ಥಿತಿಯಲ್ಲಿ ಇದ್ದೇನೆ, ಹೊಸ ವರ್ಷ ದಾರಿ ತೋರಿಸಬಹುದು. ಈ ಪರಿಸ್ಥಿತಿಯಲ್ಲಿ ಭಗವಾನ್_ಕೇದಾರನಾಥಜೀ ನನಗೆ ಮಾರ್ಗದರ್ಶನ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ, ಎಂದು ಹರೀಶ್ ರಾವತ್ ಟ್ವೀಟ್ ಮಾಡಿದ್ದರು.
ಈ ಎಲ್ಲಾ ಬೆಳವಣಿಗೆಯ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ತೇಪೆ ಹಚ್ಚುವ ಪ್ರಯತ್ನ ಮಾಡಲಿದ್ದು, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಪ್ರೀತಮ್ ಸಿಂಗ್ ಅವರನ್ನು ಕಾಂಗ್ರೆಸ್ ದೆಹಲಿಗೆ ಕರೆಸಿಕೊಂಡು ಚುನಾವಣೆಗೆ ಮುನ್ನ ರಾಜ್ಯದ ನಾಯಕತ್ವದೊಳಗಿನ ವಿಷಮ ಪರಿಸ್ಥಿತಿಯನ್ನು ಶಮನಗೊಳಿಸುವ ಪ್ರಯತ್ನ ಮಾಡಲಿದೆ. ಈ ನಾಯಕರು ನಾಳೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.