ಬಾಲಕರನ್ನ ಬಳಸಿ ಬೈಕ್ ಕಳ್ಳತನ ಮಾಡಿಸ್ತಿದ್ದ ಕಾನ್ಸ್ಟೇಬಲ್ ಅರೆಸ್ಟ್, ಮನೆಯಲ್ಲೇ ನಕಲಿ ದಾಖಲೆ ಸೃಷ್ಟಿ! | ಜನತಾ ನ್ಯೂಸ್
ಬೆಂಗಳೂರು : ಅಪ್ರಾಪ್ತರನ್ನು ಬಳಸಿಕೊಂಡು ಬೈಕ್ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್ಸ್ಟೇಬಲ್ನನ್ನು ಅದೇ ಇಲಾಖೆಯ ಪೊಲೀಸರೇ ಬಂಧಿಸಿರುವ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ.
ಬಂಧಿತನ್ನು ಹೊನ್ನಪ್ಪ ಅಲಿಯಾಸ್ ರವಿ ಎಂದು ಗುರುತಿಸಲಾಗಿದೆ. 2016ರ ಬ್ಯಾಚ್ನ ಸಿವಿಲ್ ಕಾನ್ಸ್ಟೇಬಲ್ ಆಗಿರುವ ಹೊನ್ನಪ್ಪ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿದ್ದ.
ಹೊನ್ನಪ್ಪ ಜತೆಗೆ ರಾಜಸ್ಥಾನದ ರಮೇಶ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ತನ್ನ ಮನೆಯಲ್ಲಿ ಹುಡುಗರಿಗೆ ಆಶ್ರಯ ನೀಡಿ, ಬೈಕ್ಗಳ ಕಳ್ಳತನ ಮಾಡಿಸುತ್ತಿದ್ದ ಬಂಧಿತ ಪೊಲೀಸ್ ಕಾನ್ಸ್ಟೇಬಲ್ ಹೊನ್ನಪ್ಪ. ರಮೇಶ್ ಮತ್ತು ಇಬ್ಬರು ಅಪ್ರಾಪ್ತರ ತಂಡವು ಬೆಂಗಳೂರು ಸುತ್ತಮುತ್ತ ಬೈಕ್ಗಳನ್ನು ಕದಿಯುತ್ತಿತ್ತು. ಇವರೆಲ್ಲರೂ ಕಾನ್ಸ್ಟೇಬಲ್ ಮನೆಯಲ್ಲೇ ಉಳಿದುಕೊಂಡು ಕುಕೃತ್ಯ ಎಸಗುತ್ತಿದ್ದರು. ಬಳಿಕ ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ರೂ. ಹಣವನ್ನು ಹುಡುಗರಿಗೆ ನೀಡ್ತಿದ್ದ.
ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಕದ್ದ ವಾಹನಗಳನ್ನು ಆಲ್ಟ್ರೇಶನ್ ಮಾಡಿಸಿ, ಮಾರಾಟ ಮಾಡ್ತಿದ್ದ ರಮೇಶ್. ಕದ್ದ ಬೈಕ್ಗಳ ದಾಖಲೆಗಳನ್ನು ಕಾನ್ಸ್ಟೇಬಲ್ ಹೊನ್ನಪ್ಪನ ಮನೆಯಲ್ಲೇ ತಯಾರು ಮಾಡ್ತಿದ್ದರು. ಇದಕ್ಕಾಗಿ ಮನೆಯಲ್ಲಿ ಲ್ಯಾಪ್ಟಾಪ್ ಮತ್ತು ಪ್ರಿಂಟರ್ ಇಟ್ಟುಕೊಂಡು ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಯಶಸ್ವೀ ಕಾರ್ಯಾಚರಣೆ ನಡೆಸಿರುವ ಮಾಗಡಿ ರಸ್ತೆ ಪೊಲೀಸರು ಬಂಧಿತರಿಂದ 77 ಲಕ್ಷ ಮೌಲ್ಯದ 53 ಬೈಕ್ ಗಳು ವಶಕ್ಕೆ ಪಡೆದಿದ್ದಾರೆ.