ಮೀನುಗಾರನನ್ನ ಉಲ್ಟಾ ನೇತುಹಾಕಿ ಕ್ರೌರ್ಯ ಮೆರೆದ ಪ್ರಕರಣ, ಆರು ಮೀನುಗಾರರ ಬಂಧನ | ಜನತಾ ನ್ಯೂಸ್
ಮಂಗಳೂರು : ಹಳೆ ಬಂದರಿನಲ್ಲಿ ಮೀನುಗಾರನೊಬ್ಬನನ್ನು ಮೀನುಗಾರಿಕಾ ಹಡಗಿನಲ್ಲಿ ತಲೆಕೆಳೆಗೆ ಮಾಡಿ ನೇತುಹಾಕಿ ಹಲ್ಲೆ ನಡೆಸಿದ್ದ ವಿಡಿಯೋ ವೈರಲ್ ಆಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮೂಲದ ಆರು ಮೀನುಗಾರರನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಲ್ಲೂರಿನ ಕೊಂಡೂರು ಪೋಲಯ್ಯ(23), ಅವುಲ್ ರಾಜ್ ಕುಮಾರ್(26), ಕರಪಿಂಗರ ರವಿ(27), ಪ್ರಳಯಕಾವೇರಿ ಗೋವಿಂದಯ್ಯ(47), ಪ್ರಕಾಶಂ ಜಿಲ್ಲೆಯ ಕಟಿಂಗರಿ ಮನೋಹರ್(21), ವೋಟು ಕೋರಿ ಜಾಲಯ್ಯ(30) ಎಂದು ಗುರುತಿಸಲಾಗಿದೆ.
ಹಲ್ಲೆಗೊಳಗಾದ ಮೀನುಗಾರನನ್ನು ಪ್ರಕಾಶಂ ಜಿಲ್ಲೆಯ ವೈಲಾ ಶೀನು(32) ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ದಕ್ಷಿಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಲೋಕೇಶ್ ಎಸಿ ಅವರ ಮೊಬೈಲ್ ಗೆ ಮೀನುಗಾರನನ್ನು ಥಳಿಸಿದ ವಿಡಿಯೋ ಬಂದಿತ್ತು. ಅವರು ಸಂತ್ರಸ್ತನನ್ನು ಹುಡುಕಲು ಪ್ರಾರಂಭಿಸಿದರು ಮತ್ತು ಅವರ ಕುಟುಂಬವನ್ನು ತಲುಪಿದರು. ಅಷ್ಟರಲ್ಲಾಗಲೇ ಘಟನೆಯಿಂದ ಮನನೊಂದ ಸಂತ್ರಸ್ತ ವ್ಯಕ್ತಿ ಕಾರವಾರಕ್ಕೆ ತೆರಳಿದ್ದರು. ನಂತರ ಅವರು ಮಂಗಳೂರಿಗೆ ಮರಳಿದ್ದು, ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ.
ಇವರೆಲ್ಲರೂ ಮೀನುಗಾರ ಕಾರ್ಮಿಕರಾಗಿದ್ದು, ಡಿಸೆಂಬರ್ 15 ರಂದು ಮೀನುಗಾರಿಕೆಗೆ ತೆರಳಬೇಕಿತ್ತು. ಇದಕ್ಕಾಗಿ ಡಿಸೆಂಬರ್ 14 ರಂದು ಸಣ್ಣ ಪಾರ್ಟಿ ಇಟ್ಟುಕೊಂಡಿದ್ದರು. ಈ ಪಾರ್ಟಿ ಮುಗಿಸಿ ವೈಲ ಶೀನು (32) ಎಂಬಾತ ರಾತ್ರಿ ಬೋಟ್ನಲ್ಲಿ ಮಲಗಿದ್ದ. ಮರುದಿನ ಬೆಳಗ್ಗೆ ಬೋಟ್ ಬಳಿಗೆ ಬಂದ ಆರೋಪಿಗಳು ಪಾರ್ಟಿ ವೇಳೆ ಮೊಬೈಲ್ ಕದ್ದ ಆರೋಪ ಮಾಡಿ ಆತನ ಕಾಲಿಗೆ ಹಗ್ಗ ಕಟ್ಟಿ ಉಲ್ಟಾ ನೇತು ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು.
ಇದರ ವಿಡಿಯೋ ವೈರಲ್ ಆಗಿದ್ದು ಆರಂಭದಲ್ಲಿ ಅದರಲ್ಲಿನ ಸಂಭಾಷಣೆ ನೋಡಿ ತಮಿಳುನಾಡು ಕಡೆಯಲ್ಲಿ ನಡೆದಿರಬಹುದೆಂದು ಶಂಕಿಸಲಾಗಿತ್ತು. ಬಳಿಕ ಕೂಲಂಕಷವಾಗಿ ಗಮನಿಸಿದಾಗ ಮಂಗಳೂರಿನ ದಕ್ಕೆಯಲ್ಲಿ ನಡೆದ ಘಟನೆ ಎಂದು ತಿಳಿದುಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು