ತಜ್ಞರ ಕಮಿಟಿ ಸಲಹೆ ಮೇರೆಗೆ ಟಫ್ ರೂಲ್ಸ್, ಆರ್.ಅಶೋಕ್ ಪರೋಕ್ಷವಾಗಿ ಲಾಕ್ಡೌನ್ ಸುಳಿವು! | ಜನತಾ ನ್ಯೂಸ್
ಬೆಂಗಳೂರು : ನೈಟ್ ಕರ್ಫ್ಯೂ ಮುಗಿಯುವ ಮುನ್ನವೇ ಸಭೆ ನಡೆಸಿ, ತಜ್ಞರ ಕಮಿಟಿ ಸಲಹೆ ಮೇರೆಗೆ ಟಫ್ ರೂಲ್ಸ್ ಜಾರಿಗೊಳಿಸುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಪರೋಕ್ಷವಾಗಿ ಲಾಕ್ಡೌನ್ ಸುಳಿವು ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಅನ್ನು ರೆಡ್ಝೋನ್ ಎಂದು ಕೇಂದ್ರ ಸರಕಾರ ಹೇಳಿದೆ. ಕಳೆದ ಬಾರಿ ಸಂಭವಿಸಿದ ಸಾವು-ನೋವುಗಳನ್ನು ನೋಡಿದ್ದೇವೆ. ಮತ್ತೊಮ್ಮೆ ಸನ್ನಿವೇಶ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ತಜ್ಞರು ಹಾಗೂ ಸಚಿವರನ್ನು ಒಳಗೊಂಡಂತೆ ಮತ್ತೊಮ್ಮೆ ಸಭೆ ಕರೆದು ಕಠಿಣ ನಿಯಮಗಳ ಬಗ್ಗೆ ನಿರ್ಧಾರ ಮಾಡಬಹುದು ಎಂದು ತಿಳಿಸಿದರು.
ಕೋವಿಡ್ ಮೂರನೇ ಅಲೆ ಬರುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಮತ್ತೊಂದೆಡೆ ತಜ್ಞರ ಸಮಿತಿ ನೀಡುವ ಸಲಹೆಗಳನ್ನು ಯಥಾವತ್ತಾಗಿ ಜಾರಿಮಾಡಲಾಗುತ್ತದೆ ಎಂದ ಅವರು, ಸಾರ್ವಜನಿಕರು ಕೋವಿಡ್ ಸೋಂಕು ತಡೆಗಟ್ಟಲು ಸರಕಾರ ಹೇರಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು. ಇಲ್ಲದ್ದಿದ್ದರೆ ದೆಹಲಿ, ಮುಂಬೈ, ಪಶ್ಚಿಮ ಬಂಗಾಳದ ರೀತಿಯಲ್ಲಿ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಟಾನಕ್ಕೆ ಆಗ್ರಹಿಸಲು ನಡೆಸಲು ಮುಂದಾಗಿರುವ ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್, ಜೆಡಿಎಸ್ ನವರು ಏನು ಮಾಡುತ್ತಾರೆ ಅನ್ನೋದು ನಮಗೆ ಮುಖ್ಯವಲ್ಲ. ರಾಜ್ಯದ ಜನರ ಜೀವ ಕಾಪಾಡೋದು ಮುಖ್ಯ. ಯಾವುದೇ ರ್ಯಾಲಿ, ಸಭೆ ಬಗ್ಗೆ ತಲೆಯಲ್ಲಿ ಇಲ್ಲ. ಹೀಗಾಗಿ ಜನವರಿ 4 ಅಥವಾ 5ರಂದು ಸಭೆ ಮಾಡಿ ಕೋವಿಡ್ ತಡೆಗೆ ಬಿಗಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವ ಅಶೋಕ್ ಹೇಳಿದರು.