ಮುಂದಿನ 4-6 ವಾರ ರಾಜ್ಯದ ಜನರು ಎಚ್ಚರದಿಂದ ಇರಬೇಕು! | ಜನತಾ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಮುಂದಿನ 4-6 ವಾರಗಳ ಕಾಲ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಬುಧವಾರ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ದೇಶಗಳಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ನಾವು ಮುಂದಿನ 4-6 ವಾರಗಳ ಕಾಲ ಬಹಳ ಎಚ್ಚರಿಕೆಯಿಂದ ನಡೆದುಕೊಂಡರೆ, ಈ ಮೂರನೆ ಅಲೆಯನ್ನು ನಿಯಂತ್ರಣಕ್ಕೆ ತರಬಹುದು ಎಂದರು.
ಮೊದಲ ಹಾಗೂ ಎರಡನೇ ಅಲೆಯಲ್ಲಿ 3-5 ತಿಂಗಳ ಕಾಲ ತೀವ್ರತೆ ಇತ್ತು. ಆದರೆ, ಮೂರನೇ ಅಲೆಯಲ್ಲಿ ಹಾಗೇ ಇರೋದಿಲ್ಲ. ಬದಲಿಗೆ ಬಹಳ ವೇಗವಾಗಿ ಹರಡುತ್ತೆ, ಅಷ್ಟೇ ವೇಗವಾಗಿ ಕಡಿಮೆ ಆಗುತ್ತೆ. ಈ ನಿಟ್ಟಿನಲ್ಲಿ ಕನಿಷ್ಟ 4-6 ವಾರಗಳು ಕೋವಿಡ್ ನಿಯಮ ಪಾಲಿಸಿದರೆ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ ಎಂದರು.
ಒಮೈಕ್ರಾನ್ ಸೋಂಕು ತಗಲುತ್ತಿದ್ದಂತೆ ಯಾರು ಆತಂಕಕ್ಕೆ ಒಳಗಾಗಿ ತಕ್ಷಣ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಈ ಒಮೈಕ್ರಾನ್ ವೈರಾಣುವಿನ ಸ್ವಭಾವವು ಮೂಗಿನಿಂದ ಗಂಟಲಿಗೆ ಹೋಗುತ್ತದೆ, ಆದರೆ, ಶ್ವಾಸಕೋಶಕ್ಕೆ ಹೋಗುವುದು ತೀರಾ ಕಡಿಮೆ. ಆದುದರಿಂದ, ಆಕ್ಸಿಜನ್, ವೆಂಟಿಲೇಟರ್, ಐಸಿಯು ದಾಖಲಾತಿಯ ಪ್ರಕರಣ ತೀರಾ ಕಡಿಮೆ ಎಂದು ಸುಧಾಕರ್ ಹೇಳಿದರು.